ಮಂಡ್ಯ: ಸದಾಶಿವ ವರದಿ ಶಿಫಾರಸ್ಸು ವಿರೋಧಿಸಿ ಧರಣಿ

Update: 2018-01-29 15:29 GMT

ಮಂಡ್ಯ, ಜ.29: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಯಿಲ್ಲದೆ ಕೇಂದ್ರಕ್ಕೆ ಶಿಫಾರಸು ಮಾಡುತ್ತಿರುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಿಂದ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು, ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯವ್ಯಾಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಧರಣಿ ನಡೆಸಿದ ಅವರು, ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿಸಲು ಪ್ರಚೋದನೆ ಮಾಡುತ್ತಿರುವ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಶಿಕಾರಿಪುರದ ನಿವಾಸಕ್ಕೆ ಫೆ.1 ರಂದು ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ಯಾರೂ ಸಮಗ್ರವಾಗಿ ವರದಿಯನ್ನು ಓದಿಲ್ಲ. ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಛಲವಾದಿ, ಕೊರಮ, ಕೊರಚ, ದೊಂಬಿದಾಸ, ಬುಡ್ಗಜಂಗಮ, ಸಿಳ್ಳೆಕ್ಯಾತ, ದಕ್ಕಲಿಗರು, ಸಿಂಧೋಳ್ ಇತ್ಯಾದಿ ದಲಿತ ಅಲೆಮಾರಿಗಳ ವಿರುದ್ಧ ಎತ್ತಿಕಟ್ಟಿ ದ್ವೇಷದ ಬೀಜ ಬಿತ್ತಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸೋರಿಕೆಯಾಗಿರುವ ಈ ವರದಿಯ ಅಂಶಗಳಿಂದಾಗಿ ದಲಿತ ಸಮುದಾಯದ ಒಳಗೆ ಪರಸ್ಪರ ದ್ವೇಷ, ಅನುಮಾನ, ವೈಭವೀಕರಣ, ಅಪಮಾನದಂಥ ತಪ್ಪು ಕಲ್ಪನೆಗಳನ್ನು ಮೂಡಿಸಲಾಗುತ್ತಿದೆ. ತಜ್ಞರು, ಸಾರ್ವಜನಿಕ ಅಭಿಪ್ರಾಯ ಪಡೆಯದೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಅವರು ಒತ್ತಾಯಿಸಿದರು.

101 ಪರಿಶಿಷ್ಟ ಜಾತಿಗಳಿಗೆ ವರದಿಯ ದೃಢೀಕೃತ ಪ್ರತಿ ಕೊಡಬೇಕು. ಎಲ್ಲ ಸಮುದಾಯಗಳು ತಮ್ಮ ಅಹವಾಲು, ಆಕ್ಷೇಪಣೆ ಹಾಗೂ ತಕರಾರು ಸಲ್ಲಿಸಲು ಅವಕಾಶ ನೀಡಬೇಕು. ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಬಂದಾಗ ಈ ಸಮುದಾಯಗಳ ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆಯಾಗದಂತೆ ಜನಪ್ರತಿನಿಧಿಗಳು ದನಿ ಎತ್ತಬೇಕು. ಒಕ್ಕೂಟದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ರಾಜ್ಯ ಮಾಧ್ಯಮ ವಕ್ತಾರ ತಿರುಮಲಾಪುರ ಕೆ.ಗೋಪಾಲ್, ಜಿಲ್ಲಾ ಭಾರತೀಯ ಬೋವಿ ಪರಿಷತ್‍ನ ಅಧ್ಯಕ್ಷ ಟಿ.ಸಿ.ಗುರಪ್ಪ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣನಾಯಕ್, ಜಿಲ್ಲಾ ಕುಳುವ ಸಮಾಜದ ಪ್ರಧಾನ ಕಾರ್ಯದರ್ಶಿ ಕಿರಣ್‍ಕುಮಾರ್ ಕೊತ್ತಗೆರೆ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News