ಕೆಲಸದಿಂದ ವಜಾ ಆರೋಪ: ಶಿಕ್ಷಕಿ ಏಕಾಂಗಿ ಪ್ರತಿಭಟನೆ
Update: 2018-02-01 16:53 GMT
ಮೈಸೂರು,ಫೆ.1: ಕಳೆದ 26 ವರ್ಷದಿಂದ ಮಹಾಜನ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಶಿಕ್ಷಕಿಯೋರ್ವರು ಏಕಾಂಗಿ ಪ್ರತಿಭಟನೆ ನಡೆಸಿದರು.
ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಶಿಕ್ಷಕಿ ಸಂಪತ್ ಕುಮಾರಿ ಮಹಾಜನ ಪ್ರೌಢಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿ, ಮಾಧ್ಯಮಗಳೊಂದಿಗೆ ಮಾತನಾಡಿ, ಮಹಾಜನ ಪ್ರೌಢಶಾಲಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೂನಿಯರ್ ಶಿಕ್ಷಕರಿಗೆ ಬಡ್ತಿ ನೀಡಿ ನನ್ನನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಕಾನೂನು ಹೋರಾಟ ನಡೆಸಿದ್ದೆ, ಕೋರ್ಟ್ ನಲ್ಲಿ ಕೂಡ ನನ್ನ ಪರವಾಗಿ ತೀರ್ಪು ಬಂದಿದೆ. ಆದರೂ ಕೂಡ ಸಂಸ್ಥೆಯವರು ಯಾವುದೇ ರೀತಿಯ ಕೆಲಸವಾಗಲೀ ಅಥವಾ ಪರಿಹಾರವಾಗಲಿ ನೀಡಿಲ್ಲ ಎಂದು ಆರೋಪಿಸಿದರು.