ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ರಾಹುಲ್ ಭೇಟಿ
Update: 2018-02-10 16:22 GMT
ಕೊಪ್ಪಳ, ಫೆ.10: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಠ, ದೇವಾಲಯಗಳ ಭೇಟಿ ಮುಂದುವರೆದಿದ್ದು, ಮೊದಲ ಬಾರಿಗೆ
ಕೊಪ್ಪಳದ ಹುಲಿಗೆಮ್ಮ ದೇಗುಲಕ್ಕೆ ಭೇಟಿ ನೀಡಿದರು.
ಶನಿವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಕೆಪಿಸಿಸಿ ಆಯೋಜಿಸಿದ್ದ 'ಜನಾರ್ಶೀವಾದ ಸಮಾವೇಶ’ದಲ್ಲಿ ಭಾಗವಹಿಸಿದ ಬಳಿಕ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು.ನಂತರ ಗವಿ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಕರ್ತೃ ಗದ್ದುಗೆಯ ದರ್ಶನ ಪಡೆದರು.
ಇದಾದ ಬಳಿಕ ಮಠದಲ್ಲಿ ಮಕ್ಕಳೊಂದಿಗೆ ಕೆಲ ಹೊತ್ತು ಸಮಯ ಕಳೆದು, ಅಭಿನವ ಗವಿಶ್ರೀಗಳ ಆಶೀರ್ವಾದ ಪಡೆದರು. ಮಕ್ಕಳು ರಾಹುಲ್ ಅವರಿಗೆ ಗುಲಾಬಿ ಹೂ ನೀಡಿ ಶುಭಕೋರಿದರು.
ಭೇಟಿ ವೇಳೆ ಮಠದ ಶ್ರೀಗಳು ಮಠದ ಕಾರ್ಯವೈಖರಿಯ ಚಿತ್ರಗಳನ್ನು ರಾಹುಲ್ ಅವರಿಗೆ ತೋರಿಸಿ ವಿವರಣೆ ನೀಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.