ಮಡಿಕೇರಿ: ಫೆ.27 ರಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಬೃಹತ್ ಸಮಾವೇಶ

Update: 2018-02-14 17:35 GMT

ಮಡಿಕೇರಿ,ಫೆ.14 : ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಮಾವೇಶ ಫೆ.27 ರಂದು ಕುಶಾಲನಗರದ ರೈತ ಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಹೆಚ್.ಯು.ಇಸಾಕ್ ಖಾನ್, ಸಮಾವೇಶ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್, ಅಲ್ಪ ಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷರಾದ ಸಯ್ಯದ್ ಮುಹೀದ್ ಅಲ್ತಾಫ್, ರಾಷ್ಟ್ರ ಉಪಾಧ್ಯಕ್ಷರಾದ ಪಿ. ಜಿ. ಆರ್. ಸಿಂಧ್ಯ, ಮಾಜಿ ಸಂಸದರು ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್. ವಿಶ್ವನಾಥ್, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ಹಾಗೂ ಕೊಡಗು ಜಿಲ್ಲಾ ಜೆಡಿಎಸ್ ಪಕ್ಷದ ಉಸ್ತುವಾರಿಯಾದ ಜಿ.ಟಿ. ದೇವೇಗೌಡ, ಕ್ರಿಶ್ಚನ್ ವಿಂಗ್‍ನ ರಾಜ್ಯ ಅಧ್ಯಕ್ಷರಾದ ವಿಲ್ಸನ್ ರೆಡ್ಡಿ, ಮಾಜಿ ಸಚಿವರು ಹಾಗೂ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾದ ಬಿ.ಎ. ಜೀವಿಜಯ, ಜೆ.ಡಿಎಸ್‍ನ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯ ಮಟ್ಟದ ನಾಯಕರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. 

ಕಾಂಗ್ರೆಸ್‍ಗೆ ಧ್ವನಿ ಇಲ್ಲ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇಸಾಕ್, ಅಲ್ಪಸಂಖ್ಯಾತರಿಗೆ ಸಂಕಷ್ಟ ಬಂದೊದಗಿದ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಧ್ವನಿಯನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಈ ಹಿಂದೆ ಜಿ.ಪಂ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಲತೀಫ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಕಾಂಗ್ರೆಸ್ ತಿಳಿಸಿತ್ತಾದರೂ, ಅಂತಹ ಯಾವುದೇ ಪ್ರಯತ್ನಗಳು ಜಿಲ್ಲೆಯವರೇ ಗೃಹ ಸಚಿವರಾಗಿದ್ದ ಸಂದರ್ಭದಲ್ಲೂ ನಡೆಯಲಿಲ್ಲ. ಟಿಪ್ಪು ಜಯಂತಿ ಸಂದರ್ಭ ಶಾಹುಲ್ ಹಮೀದ್ ಸಾವನ್ನಪ್ಪಿರುವ ಬಗ್ಗೆಯಾಗಲಿ, ಚೆಟ್ಟಳ್ಳಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆದ ಸಂದರ್ಭಗಳಲ್ಲಾಗಲಿ ಕಾಂಗ್ರೆಸ್ ಧ್ವನಿ ಎತ್ತಿಲ್ಲವೆಂದು ಆರೋಪಿಸಿದರು.

ಸೋಮವಾರಪೇಟೆಯಲ್ಲಿ ಅಲ್ಪಸಂಖ್ಯಾತ ಸಮೂಹದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಂದ ಕುಮಾರ್ ಎಂಬಾತನನ್ನು ಕಾಂಗ್ರೆಸ್ ಪಕ್ಷ ಉಚ್ಛಾಟಿಸಬೇಕೆಂದು ಆಗ್ರಹಿಸಿದ ಇಸಾಕ್ ಖಾನ್, ಇಲ್ಲವಾದರೆ ಜಿಲ್ಲೆಯ ವಿವಿಧ ಸಂಘಟನೆಗಳೊಂದಿಗೆ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಜೋಕಿಂ ವಾಸ್ ಮಾತನಾಡಿ, ಇದೇ ಫೆ.17 ರಂದು ಬೆಂಗಳೂರಿನಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿಯ ಜಂಟಿ ಬೃಹತ್ ‘ವಿಕಾಸ ಪರ್ವ’ ಸಮಾವೇಶ ನಡೆಯಲಿದ್ದು, ಕೊಡಗಿನಿಂದ 5 ಸಾವಿರ ಹಾಗೂ ರಾಜ್ಯವ್ಯಾಪ್ತಿಯಿಂದ 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಮಾವೇಶದಲ್ಲಿ  ಕೊಡಗಿನ ಎರಡು ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ ಮಾತನಾಡಿ, ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಬಿ.ಎ.ಜೀವಿಜಯ ಅವರಿಗೆ ಅಲ್ಪಸಂಖ್ಯಾತರು ಬೆಂಬಲವನ್ನು ನೀಡಬೇಕು. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು, ಜೆಡಿಎಸ್‍ಗೆ ಅಲ್ಪಸಂಖ್ಯಾತರು ಶಕ್ತಿ ತುಂಬಬೇಕೆಂದರು. ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರ ಸ್ಪರ್ಧೆಯಿಂದ ಆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಆ ಕ್ಷೇತ್ರದಲ್ಲಿ ಶಾಸಕರ ರೀತಿಯಲ್ಲಿ ಸಂಕೇತ್ ಪೂವಯ್ಯ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ ಹಾಗೂ ಅಲ್ಪಸಂಖ್ಯಾತರ ಘಟಕದ ಕಾರ್ಯದಾರ್ಶಿ ಅಜೀಜ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News