ಮಂಡ್ಯ: ದರೋಡೆ, ಕೊಲೆಯತ್ನ: 5 ಆರೋಪಿಗಳ ಬಂಧನ
ಮಂಡ್ಯ, ಫೆ.14: ಇತ್ತೀಚೆಗೆ ಮಳವಳ್ಳಿ ಪಟ್ಟಣದ ಹೊರವಲಯದ ಕಣಿಗಲು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆಸಿ, ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಕೊಲೆಯತ್ನ ನಡೆಸಿದ್ದ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕಾರು ಮತ್ತು 5050ರೂ. ನಗದನ್ನು ವಶಪಡಿಸಿದ್ದಾರೆ.
ಬೆಂಗಳೂರು ಮೂಲದ ಆರ್.ಭಾನುಪ್ರಕಾಶ್ ಅಲಿಯಾಸ್ ತುರೆ, ನಾಗೇಂದ್ರ ಆಲಿಯಾಸ್ ಕುಡುಕ, ದೀಪಕ್ ಅಲಿಯಾಸ್ ಗಿರೀಶ್, ರಕ್ಷೀತ್ ಅಲಿಯಾಸ್ ಕಪ್ಪೆ ಹಾಗೂ ಚೇತನ್ ಬಂಧಿತರು. ಇವರಿಂದ ಕಾರು, 5,050 ರೂ., ಕೃತ್ಯಕ್ಕೆ ಬಳಸಿದ್ದ ಪರಿಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫೆ.6ರಂದು ಮಳವಳ್ಳಿ ಪಟ್ಟಣದ ಲಾಗುರಾಂ ಎಂಬುವರ ಮನೆ ಗೃಹಪ್ರವೇಶಕ್ಕೆ ಬಂದಿದ್ದ ಕೊಳ್ಳೇಗಾಲದ ಉಕಾರಾಂ ಮತ್ತು ಸ್ನೇಹಿತರು ವಾಪಸ್ ಹೋಗುತ್ತಿದ್ದಾಗ ಆರೋಪಿಗಳು ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದರು. ನಂತರ ಇದೇ ಆರೋಪಿಗಳು ಚೊಟ್ಟನಹಳ್ಳಿ ಗ್ರಾಮದ ನಾಗರಾಜು ಎಂಬುವವರ ಮನೆಗೆ ಹೋಗಿ ಗಲಾಟೆ ನಡೆಸಿ ಕಲ್ಲಿನಿಂದ ಬಾಗಿಲು ಮತ್ತು ಕಿಟಕಿ ಒಡೆದು ನಾಗರಾಜು ಮೇಲೆ ಹಲ್ಲೆಗೆ ಯತ್ನಿಸಿದ್ದರು. ಪ್ರಶ್ನಿಸಿದ ಪಕ್ಕದ ಮನೆಯ ನವೀನ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಮದ್ದೂರು ಟ್ರಾಫಿಕ್ ಪಿಎಸ್ಐ ಸಂತೋಷ್, ಬೆಸಗರಹಳ್ಳಿ ಪಿಎಸ್ಐ ಮೊಹನ್ ಪಟೇಲ್, ಸಿಬ್ಬಂದಿಗಳಾದ ಎಎಸ್ಐ ಮಹದೇವಪ್ಪ, ಸಿಪಿಸಿಗಳಾದ ಪ್ರಭುಸ್ವಾಮಿ, ರಿಯಾಜ್ಪಾಷ, ಮೋಹನ್ಕುಮಾರ್ ಚರಂಜೀವಿ ಹಾಗೂ ಶರತ್ ತಂಡ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿದ್ದರು.