ತುಮಕೂರು: ರೈಲ್ವೆ ಯೋಜನೆಗೆ ತ್ವರಿತ ಭೂಮಿ ಹಸ್ತಾಂತರಿಸಲು ಸಂಸದರ ಸೂಚನೆ

Update: 2018-02-17 14:05 GMT

ತುಮಕೂರು,ಫೆ.17: ತುಮಕೂರು-ರಾಯದುರ್ಗ ಹಾಗೂ ತುಮಕೂರು ದಾವಣಗೆರೆ ರೈಲ್ವೆ ಯೋಜನೆ ನಿರ್ಮಾಣ ಕಾಮಗಾರಿಕೆ ಅಗತ್ಯವಿರುವ ಜಮೀನನ್ನು ಆದಷ್ಟು ಬೇಗ ಹಸ್ತಾಂತರಿಸಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗೆ ಹೆಚ್ಚಿನ ವೇಗ ನೀಡುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ತುಮಕೂರು-ರಾಯದುರ್ಗ ಹಾಗೂ ತುಮಕೂರು ದಾವಣಗೆರೆ ರೈಲ್ವೆಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತಿದ್ದ ಅವರು, ಈಗಾಗಲೇ ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯ ಕಾಮಗಾರಿಯು ತುಮಕೂರು ತಾಲೂಕಿನಿಂದ ಆರಂಭವಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಉಳಿದಂತೆ ಕೊರಟಗೆರೆ, ಮಧುಗಿರಿ ಹಾಗೂ ಪಾವಗಡದಲ್ಲಿ ಕಾಮಗಾರಿಯು ಆರಂಭವಾಗಬೇಕಿದೆ. ಆದಷ್ಟು ಬೇಗ ಅಗತ್ಯವಿರುವ ಜಮೀನನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೆ ಪಾವಗಡ ತಾಲ್ಲೂಕಿನಲ್ಲಿ 339.17 ಎಕರೆ ಭೂಮಿ ಸ್ವಾಧೀನಕ್ಕಾಗಿ ಜೆಎಂಸಿ ಕಾರ್ಯ ಪೂರ್ಣಗೊಂಡಿದ್ದು ಕರ್ನಾಟಕ ಭೂಸ್ವಾಧೀನ ಕಾಯ್ದೆ 15(2) ರನ್ವಯ ಸರಕಾರದಿಂದ ಅನುಮತಿ ಪಡೆಯಬೇಕಾಗಿದೆ. ಭೂಸ್ವಾಧೀನ ಅಧಿಕಾರಿಯಿಂದ ಬರುವ ಸೋಮವಾರದೊಳಗೆ ಪ್ರಸ್ತಾವನೆ ಪಡೆದು ಸರಕಾರದಿಂದ ಅನುಮತಿ ಪಡೆಯಲಾಗುವುದು. ಫೆಬ್ರವರಿ ಅಂತ್ಯದೊಳಗೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದಲ್ಲದೆ, ಮಾರ್ಚ್ 10ರೊಳಗೆ ಪಾವಗಡ ತಾಲೂಕಿನ 339.17ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಕೊರಟಗೆರೆ ತಾಲೂಕಿನಲ್ಲಿ ಯೋಜನೆಗೆ ಅಗತ್ಯವಿದ್ದ 198.11 ಎಕರೆ ಪೈಕಿ 53.38 ಎಕರೆ ಭೂಮಿಯನ್ನು, ಮಧುಗಿರಿ ತಾಲೂಕಿನಲ್ಲಿ 462.12 ಎಕರೆ ಪೈಕಿ 34.34 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಉಳಿದ ಜಮೀನಿಗೆ ಶೀಘ್ರ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು ಎಂದು ವಿಶೇಷ ಭೂ ಸ್ವಾಧೀನ ಅಧಿಕಾರಿ ಆರತಿ ಆನಂದ್ ಹೇಳಿದರು.

ರೈಲ್ವೆ ಮಂಡಳಿಯ ಹೊಸ ನಿಯಮಾವಳಿಯ ಪ್ರಕಾರ ರೈಲ್ವೆ ಮಾರ್ಗ ಹಾದು ಹೋಗುವ ಮಾರ್ಗಗಳಲ್ಲಿ ಲೆವಲ್‍ಕ್ರಾಸ್ ಬದಲಾಗಿ ಬ್ರಿಡ್ಜ್ ಗಳನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಪಾವಗಡದಲ್ಲಿ 86 ಎಕರೆ ಅದೇ ರೀತಿ ಕೊರಟಗೆರೆ, ಮಧುಗಿರಿ, ತುಮಕೂರು ತಾಲೂಕಿನಲ್ಲಿ ಹೆಚ್ಚುವರಿ ಜಮೀನಿನ ಅಗತ್ಯವಿದ್ದು, ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೀಡುವಂತೆ ರೈಲ್ವೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗೆ ತುಮಕೂರು ತಾಲೂಕಿನಲ್ಲಿ 323 ಎಕರೆ ಹಾಗೂ ಶಿರಾ ತಾಲೂಕಿನಲ್ಲಿ 551 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ಪೈಕಿ ಈಗಾಗಲೇ 84 ಎಕರೆ ಭೂಮಿ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ತುಮಕೂರು ದಾವಣಗೆರೆ ರೈಲ್ವೆ ಯೋಜನೆಯ ಭೂಸ್ವಾಧೀನಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮಧುಗಿರಿ ಉಪ ವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಸೇರಿದಂತೆ ಕಂದಾಯ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News