ಹೊನ್ನಾವರ: ಲಾರಿ-ಬೈಕ್ ಮುಖಾಮುಖಿ ಢಿಕ್ಕಿ; ಸವಾರ ಮೃತ್ಯು
Update: 2018-02-19 16:26 GMT
ಹೊನ್ನಾವರ,ಫೆ.19: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಳದೀಪುರ ಸಾಲಿಕೇರಿಯ ಶ್ರೀ ಗಣಪತಿ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಗುಳೇದಗುಡ್ಡದ ಕೃಷ್ಣ ಹನುಮಪ್ಪ ಗುಂಡಗಾಜಿ (20) ಮೃತ ಬೈಕ್ ಸವಾರ.
ಕೃಷ್ಣ ಹನುಮಪ್ಪ ಮತ್ತು ಇನ್ನೊರ್ವ ಸ್ನೇಹಿತ ಬೈಕ್ ಮೂಲಕ ಹೊನ್ನಾವರದಿಂದ ಕುಮಟಾ ಮಾರ್ಗವಾಗಿ ಗದಗಕ್ಕೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕೃಷ್ಣ ಹನುಮಪ್ಪ ಮೃತಪಟ್ಟರೆ, ಹಿಂಬದಿ ಸವಾರ ಗದಗದ ನಿವಾಸಿ ಕೃಷ್ಣ ಯಲ್ಲಪ್ಪ (22) ಅವರ ತಲೆಗೆ ಹಾಗೂ ಕೈ-ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.