ಕೆ.ಆರ್.ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; ಚಾಲಕ ಮೃತ್ಯು
Update: 2018-02-23 18:08 GMT
ಕೆ.ಆರ್.ಪೇಟೆ,ಫೆ.23: ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ .ಸಿ ಓಲ್ವಾ ಬಸ್ ಪಲ್ಟಿಯಾಗಿ ಒಬ್ಬ ಮೃತಪಟ್ಟು, 13 ಮಂದಿಗೆ ಗಾಯಗಳಾದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಬಸವನಹಳ್ಳಿ ಬಳಿ ಗುರುವಾರ ರಾತ್ರಿ ಸುಮಾರು 9.30 ಗಂಟೆಯ ಸುಮಾರಿಗೆ ನಡೆದಿದೆ.
ಬಸ್ಸಿನ ಚಾಲಕ ಸೈಯದ್ ಶಕೀಲ್ ಅಹಮದ್(45) ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ ನಿರ್ವಾಹಕ ಸೇರಿದಂತೆ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತಕ್ಕೀಡಾದ ಬಸ್ ಮೈಸೂರಿನಿಂದ ಬೆಳಗಾವಿಗೆ ತೆರಳುತ್ತಿತ್ತು ಎನ್ನಲಾಗಿದೆ.
ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಕೆ.ಆರ್.ಪೇಟೆ ಸರಕಾರಿ ಆಸ್ಪತ್ರೆ ಮತ್ತು ಚನ್ನರಾಯಪಟ್ಟಣ ಸರಕಾರಿ ಆಸ್ಪತ್ರೆಗಳಿಗೆ ಸಾಗಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಕೆ.ಆರ್.ಪೇಟೆ ಡಿಪೋ ಮ್ಯಾನೇಜರ್ ಶಿವಕುಮಾರ್ ಕಿಕ್ಕೇರಿ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪಿ.ಎಸ್.ಐ ಸಿದ್ದರಾಜು ಮತ್ತು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.