ರಾಜ್ಯದಲ್ಲಿ 47 ಹೊಸ ತಾಲೂಕುಗಳ ಘೋಷಣೆ: ಸಂತೋಷ್ ಲಾಡ್

Update: 2018-02-24 15:18 GMT

ಧಾರವಾಡ, ಫೆ.24: ರಾಜ್ಯದಲ್ಲಿ ಹೊಸ 47 ತಾಲೂಕುಗಳನ್ನು ಸರಕಾರ ಘೋಷಿಸಿ, ಹೊಸ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಿದೆ. ಕೇವಲ 36 ಸಾವಿರ ಜನಸಂಖ್ಯೆಗೆ ಒಂದು ತಾಲೂಕು ರಚನೆಯಾಗಿರುವುದು ದೇಶದಲ್ಲಿ ಇದೆ ಮೊದಲು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ನಗರದ ತಾಲೂಕಿನ ಅಳ್ನಾವರ ಪಟ್ಟಣ ಪಂಚಾಯತ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಳ್ನಾವರ ತಾಲೂಕು ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳ ಶೇ.50ರ ಅನುಪಾತದಲ್ಲಿ ರೈಲ್ವೆ ಸೇತುವೆ ಕಾಮಗಾರಿಗಳು ನಡೆಯುತ್ತವೆ. ಈ ಭಾಗದಲ್ಲಿ ಕುಂಠಿತಗೊಂಡಿರುವ ಯೋಜನೆಗಳನ್ನು ಚುರುಕುಗೊಳಿಸಲು, ಆಡಳಿತಾತ್ಮಕ ಪರಿಹಾರ ಒದಗಿಸಲು ಸಭೆ ನಡೆಸಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

90 ಕೋಟಿ ರೂ.ವೆಚ್ಚದಲ್ಲಿ ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸರಕಾರ ಒಪ್ಪಿಗೆ ನೀಡಿದೆ. ಅರಣ್ಯ ಪ್ರದೇಶದಲ್ಲಿ ಕೊಳವೆ ಮಾರ್ಗ ನಿರ್ಮಿಸಬೇಕಾಗಿರುವುದರಿಂದ ಕೆಲವು ತಾಂತ್ರಿಕ ಅಡಚಣೆಗಳಿವೆ, ಅವುಗಳನ್ನು ಪರಿಹರಿಸಲಾಗುವುದು. ಕಲಘಟಗಿ ಭಾಗಕ್ಕೆ ಬೇಡ್ತಿ ನದಿ ನೀರು ತರಲು 125 ಕೋಟಿ ರೂ. ಒದಗಿಸಲಾಗಿದೆ ಸಂತೋಷ್ ಲಾಡ್ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಪ್ರಹ್ಲಾದ್ ಜೋಶಿ, ಅಳ್ನಾವರ ತಾಲೂಕು ಘೋಷಣೆಯ ಬಳಿಕವೂ ಕೆಲವು ಗ್ರಾಮಗಳ ಜನ ಈ ಹೊಸ ತಾಲೂಕಿನ ವ್ಯಾಪ್ತಿಗೆ ಸೇರಲು ಒಪ್ಪದೇ ಇದ್ದುದರಿಂದ ಕಗ್ಗಂಟು ಎದುರಾಗಿತ್ತು. ಅದನ್ನು ಪರಿಹರಿಸಲು ಸ್ಥಳೀಯ ಶಾಸಕರೂ ಆಗಿರುವ ಸಂತೋಷ್‌ಲಾಡ್ ಪ್ರಯತ್ನ ಮಾಡಿ 13 ಹಳ್ಳಿಗಳನ್ನು ಸೇರಿಸಿ ಅಳ್ನಾವರ ತಾಲೂಕು ಘೋಷಣೆ ಮಾಡಿಸಿ, ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸದ ಸಂಗತಿ ಎಂದರು.

ಅಳ್ನಾವರಕ್ಕೆ ಇನ್ನೂ ಕೆಲವು ರೈಲುಗಳ ನಿಲುಗಡೆಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಈ ಭಾಗದ ಕೆಲವು ರೈಲ್ವೆ ಮೇಲ್ಸೆತುವೆಗಳ ಕಾಮಗಾರಿ ವಿಳಂಬವಾಗಿದೆ. ಆಡಳಿತಾತ್ಮಕವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳೊಣ. ಕಾಳಿ ನದಿಯಿಂದ ಈ ಭಾಗಕ್ಕೆ ನೀರು ತರುವ ಯೋಜನೆಗೆ ಒಪ್ಪಿಗೆ ದೊರೆತಿದೆ, ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಜನರ ನಿರಂತರ ಹೋರಾಟ, ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಚುನಾಯಿತ ಪ್ರತಿನಿಧಿಗಳ ಒತ್ತಡ ಪರಿಗಣಿಸಿ, ಮುಖ್ಯಮಂತ್ರಿಗಳು ರಾಜ್ಯದಲ್ಲಿಯೆ ಅತೀ ಚಿಕ್ಕದಾಗಿರುವ ಅಳ್ನಾವರ ತಾಲೂಕು ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಎಲ್ಲ ತಾಲೂಕು ಕಚೇರಿಗಳಿಗಾಗಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗುವುದು ಎಂದರು.

ಸಮಾರಂಭಕ್ಕೂ ಮುನ್ನ ನಗರೋತ್ಥಾನ ಮೂರನೆ ಹಂತದ 1.70 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂತೋಷ ಲಾಡ್ ಚಾಲನೆ ನೀಡಿದರು. ಅಲ್ಲದೆ, ತಾಲೂಕು ರಚನೆಗಾಗಿ ಹೋರಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಸವಲತ್ತುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಜಿ.ಪಂ.ಸದಸ್ಯರಾದ ನಿಂಗಪ್ಪ, ಭಾವನಾ ಬೇಲೂರ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮುಜಾಹಿದ್ ಕಂಟ್ರಾಕ್ಟರ್, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ರಾಜೇಶ ಬೈಕೇರಿಕರ್, ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ಉಪಭಾಗಾಧಿಕಾರಿ ಮಹೇಶ ಕರ್ಜಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ, ತಹಶೀಲ್ದಾರ್ ಪ್ರಕಾಶ್ ಕುದರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News