ಬಂಧಿತ ಆರೋಪಿಯ ಮನೆ ಚಿತ್ರೀಕರಣಕ್ಕೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ
Update: 2018-02-24 22:26 IST
ಮದ್ದೂರು, ಫೆ.24: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿ ಕೆ.ಟಿ.ನವೀನ್ಕುಮಾರ್ ಮನೆಯ ಚಿತ್ರೀಕರಣಕ್ಕೆ ಹೋಗಿದ್ದ ಖಾಸಗಿ ವಾಹಿನಿಯೊಂದರ ವರದಿಗಾರ ಹಾಗೂ ಕ್ಯಾಮಾರಮೆನ್ ಮೇಲೆ ನವೀನ್ಕುಮಾರ್ ಬೆಂಬಲಿಗರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಕದಲೂರು ಗ್ರಾಮದ ನವೀನ್ಕುಮಾರ್ ರನ್ನು ಎರಡು ದಿನಗಳ ಹಿಂದೆ ಎಸ್ಐಟಿ ಪೊಲೀಸರು ಬಂಧಿಸಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯ ವರದಿಗಾರ ಶಶಿಕುಮಾರ್ ಹಾಗೂ ಕ್ಯಾಮಾರಮೆನ್ ಯೋಗೇಶ್ ವರದಿ ಮಾಡಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ಏಕಾಏಕಿ ಆಗಮಿಸಿ ಚಿತ್ರೀಕರಣ ಮಾಡುತ್ತಿರುವುದು ಸರಿಯಲ್ಲವೆಂದು ಆಕ್ರೊಶ ವ್ಯಕ್ತಪಡಿಸಿದ ನವೀನ್ ಬೆಂಗಲಿಗರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾ ಕಸಿದುಕೊಂಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು-ಪ್ರತಿ ದೂರು ನೀಡಿದ್ದು, ಪಟ್ಟಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.