ಮಡಿಕೇರಿ: ಕೂಟುಹೊಳೆ ಪ್ರಭು ಸಾವು ಸಂಶಯಾಸ್ಪದ; ಸಹೋದರನಿಂದ ದೂರು

Update: 2018-02-24 18:10 GMT

ಮಡಿಕೇರಿ ಫೆ.24: ಮಡಿಕೇರಿ ಸಮೀಪದ ಕೂಟುಹೊಳೆಯಲ್ಲಿ 2018 ಜನವರಿ 31 ರಂದು ದೊರೆತ ಪ್ರಭು ಮೃತದೇಹದ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತ್ತಿದ್ದು, ಇದೊಂದು ಸಂಶಯಾಸ್ಪದ ಸಾವೆಂದು ಮೃತ ಯುವಕನ ಸಹೋದರ ಆರೋಪಿಸಿದ್ದಾರೆ.

ಡಿವೈಎಸ್‍ಪಿ ಗೆ ದೂರು ನೀಡಿರುವ ಸಹೋದರ 2018 ಜ.31 ರಂದು ರಾತ್ರಿ ನನ್ನ ತಮ್ಮ ಪ್ರಭು ಮಲಗಿದ್ದ ಸಂದರ್ಭ ಆತನ ಸ್ನೇಹಿತರು ಪಾರ್ಟಿ ಮಾಡುವ ನೆಪವೊಡ್ಡಿ ಕರೆಸಿಕೊಂಡಿದ್ದಾರೆ. ಆದರೆ ಅಂದು ರಾತ್ರಿ ಮನೆಗೆ ಬಾರದ ಪ್ರಭುವಿನ ಮೃತದೇಹ ಫೆ.1 ರಂದು ಕೂಟುಹೊಳೆಯಲ್ಲಿ ಪತ್ತೆಯಾಗಿತ್ತು. ನೀರಿನಲ್ಲಿ ತೇಲುತ್ತಿದ್ದ ಶವವನ್ನು ತೆಗೆದು ಮರಣೋತ್ತರ ಪರೀಕ್ಷೆ ನಂತರ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ನಡುವೆ ಮೃತ ದೇಹದಲ್ಲಿ ಗಾಯಗಳಿರುವ ಬಗ್ಗೆ ವಿಡಿಯೋ ದೃಶ್ಯಗಳಿಂದ ಕಂಡು ಬಂದಿದೆ. 

ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿ ಸಂಶಯ ವ್ಯಕ್ತಪಡಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. 

ನಾವು ನೀಡಿದ ದೂರಿಗೆ ದಾಖಲೆ ನೀಡಿ ಎಂದು ಮನವಿ ಮಾಡಿದರೂ ದಾಖಲೆ ನೀಡಿಲ್ಲ. ನಾವು ದೂರು ನೀಡಿದ್ದೇವೆ ಎನ್ನುವ ಕಾರಣಕ್ಕಾಗಿ ಮನೆಗೆ ಆಗಮಿಸಿದ್ದ ಪ್ರಭುವಿನ ಸ್ನೇಹಿತರು ನಮಗೆ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಐವರು ಸ್ನೇಹಿತರು ಪ್ರಭುವಿನ ಜೊತೆಯಲ್ಲಿದ್ದರು ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News