ಶಿವಮೊಗ್ಗ: ನಾಡಕಛೇರಿ ಎದುರು ರೈತರ ಅಹೋರಾತ್ರಿ ಧರಣಿ

Update: 2018-02-26 17:03 GMT

ಶಿವಮೊಗ್ಗ, ಫೆ. 26: ಬಗರ್‍ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಒತ್ತಾಯಿಸಿ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಸೋಮವಾರ ಬಿದನೂರು ನಗರ ನಾಡ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. 

ಕರಿಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಜಾಗ ಸರಕಾರದ ಪಹಣಿ ದಾಖಲೆಗಳಲ್ಲಿ ಸೂಚಿತ ಅರಣ್ಯ (ಪಿಎಫ್) ಎಂದು ನಮೂದಾಗಿದೆ. ಈ ಭಾಗದಲ್ಲಿ ಸಾವಿರಾರು ಮುಳುಗಡೆ ಸಂತ್ರಸ್ಥರು ಜಮೀನು ಕೃಷಿ ಮಾಡುತ್ತಿದ್ದಾರೆ. ಕಂದಾಯ ಭೂಮಿ ಪ್ರದೇಶದಲ್ಲಿಯೂ ಹಲವು ಕೃಷಿ ಕುಟುಂಬಗಳು ಬಗರ್‍ಹುಕುಂ ಸಾಗುವಳಿಯಲ್ಲಿ ನಿರತವಾಗಿವೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಭೂ ಮಂಜೂರಾತಿಗಾಗಿ ಈಗಾಗಲೇ ನಮೂನೆ 50 ಹಾಗೂ 53 ಅಡಿಯಲಿ ಸುಮಾರು 295 ಹಾಗೂ 94 ಸಿ ಅಡಿಯಲಿ 243 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಇಲ್ಲಿಯವರೆಗೂ ಯಾರೊಬರಿಗೂ ಭೂ ಮಂಜೂರಾತಿ ಮಾಡಿಲ್ಲ. ಈ ಕುರಿತು ವಿಚಾರಿಸಿದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಅರಣ್ಯ ಪ್ರದೇಶ, ಕೆಪಿಸಿ ಜಾಗ ಮೊದಲಾದ ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ರೈತರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಹಕ್ಕುಪತ್ರಕ್ಕಾಗಿ ಸಲ್ಲಿಕೆಯಾದ ಅರ್ಜಿಗಳು ವಿಲೇವಾರಿಯಾಗದೇ ಉಳಿದಿವೆ. ಸರಕಾರಿ ಕಾಗದಪತ್ರಗಳಲ್ಲಿ, ಪಹಣಿ ದಾಖಲೆಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಜನಪ್ರತಿನಿಧಿಗಳು, ಸರಕಾರದ ವಿವಿಧ ಇಲಾಖೆ ಅಧಿಕಾರಿಗಳ ಮುಂದೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ ಈ ವರೆಗೂ ಪ್ರಯೋಜನವಾಗಿಲ್ಲ. ಆದ್ದರಿಂದ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವ ವರೆಗೂ ಗ್ರಾಮಸ್ಥರು ಸರದಿ ಪ್ರಕಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ತಮ್ಮ ಬೇಡಿಕೆಗಳ ಕೂಡಲೇ ಈಡೇರದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. 

ಧರಣಿ ಸ್ಥಳಕ್ಕೆ ಆಗಮಿಸಿದ ನಗರ ಹೋಬಳಿ ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್ ಕಂದಾಯ ಇಲಾಖೆ ಕೂಡಲೇ ಹಕ್ಕುಪತ್ರ ವಿತರಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಧರಣಿಯಲ್ಲಿ ಸಾದಗಲ್ ಅಂಬರೀಶ್, ಕರಿಮನೆ ಗೋಪಾಲ್, ರಮೇಶ್, ಪಾಟೀಲ್, ಗ್ರಾಪಂ ಸದಸ್ಯ ಸುರೇಶ್, ಹರೀಶ್, ಕರುಣಾಕರ ಶೆಟ್ಟಿ, ಬಿ.ಇ.ಮಂಜುನಾಥಗೌಡ, ನರ್ತಿಗೆ ಸುರೇಶ್, ಮಿಲ್ಟ್ರಿ ರಾಮಣ್ಣ, ರಾಜಾರಾಮ್ ಹೆಗಡೆ ಯಡೂರು, ಗುಂಡಪ್ಪ, ಪರ್ವತಪ್ಪ, ಸತೀಶ್, ಎಚ್.ಟಿ.ರಾಮಪ್ಪ, ಸೀತಮ್ಮ, ಅನಿತಾ, ಗಿರೀಶ್, ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News