×
Ad

ವಿದ್ಯಾರ್ಥಿ ಯುವಜನರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು: ಡಾ.ಎಂ.ಲೋಕೇಶ್

Update: 2018-02-27 22:58 IST

ಶಿವಮೊಗ್ಗ, ಫೆ. 27: ವಿದ್ಯಾರ್ಥಿ ಯುವಜನರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ  ಮುಂಬರುವ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಕರೆ ನೀಡಿದರು.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕ್ಯಾಂಪಸ್ ಅಂಬಾಸಡರ್ ಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿ ಕ್ಯಾಂಪಸ್ ಅಂಬಾಸಡರ್ ಗಳನ್ನು ನೇಮಕ ಮಾಡಲಾಗಿದೆ. ಈ ಕ್ಯಾಂಪಸ್ ಅಂಬಾಸಡರ್ ಗಳು ನಿಜವಾದ ಅರ್ಥದಲ್ಲಿ ಚುನಾವಣೆಯ ಬ್ರಾಂಡ್ ಅಂಬಾಸಡರ್‍ಗಳು. ಯಾವುದೇ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಿ ಅದನ್ನು ಜನಪ್ರಿಯಗೊಳಿಸುವ ಕಾರ್ಯ ಬ್ರಾಂಡ್ ಅಂಬಾಸಡರ್ ಗಳದ್ದು. ಅದೇ ರೀತಿ ಮತದಾನದಲ್ಲಿ ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲಿ 11ಲಕ್ಷ ಮತದಾರರು ಇದ್ದರು. ಆದರೆ ಇವರಲ್ಲಿ ಶೇ.72ರಷ್ಟು ಮಂದಿ ಮಾತ್ರ ಮತದಾನ ಮಾಡಿದ್ದಾರೆ. ಈ ಬಾರಿ ಸಧ್ಯ ಹದಿಮೂರುವರೆ ಲಕ್ಷ ಮತದಾರರು ಇದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶೇ.90ರಷ್ಟು ಮಂದಿ ಮತದಾನ ಮಾಡುವಂತಾಗಬೇಕು. ಅದರಲ್ಲೂ ವಿದ್ಯಾರ್ಥಿ ಯುವಜನರು ಶೇ.100ರಷ್ಟು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನ ದಿನ ರಜಾದಿನವೆಂದು ಮೋಜು ಮಸ್ತಿಗೆ ತೆರಳದೆ ಮತದಾನದಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಪ್ರೇರೇಪಿಸಬೇಕು ಎಂದು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಎಂಬ ಯಂತ್ರವನ್ನು ಬಳಸಲಾಗುತ್ತಿದೆ. ಇದರಿಂದ ಮತ ಯಾರಿಗೆ ಚಲಾವಣೆ ಮಾಡಲಾಗಿದೆ ಎಂದು ಮತದಾನ ಮಾಡಿದವರಿಗೆ ಖಾತ್ರಿಯಾಗಲಿದೆ. ಇದೇ ರೀತಿ ಈ ಬಾರಿ ಚುನಾವಣಾ ಆಯೋಗ ಅಂಗವಿಕಲರು ಗೌರವಯುತವಾಗಿ ಮತ ಚಲಾಯಿಸಲು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಿದ್ದು, ಇದಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 26ಸಾವಿರ ಅಂಗವಿಕಲರು ಇದ್ದು, ಅಂಗವಿಕಲತೆಯ ಸ್ವರೂಪವನ್ನು ಗುರುತಿಸುವ ಕಾರ್ಯ ನಡೆಯತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಗಾಲಿಕುರ್ಚಿಯಂತಹ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ ಅವರು ಮಾತನಾಡಿ, ಮತದಾನ ಮಾಡುವುದು ಈಗ ಹಿಂದಿನಷ್ಟು ಕಷ್ಟವಿಲ್ಲ. ಮತಗಟ್ಟೆಗಳನ್ನು ಮನೆಗಳ ಸಮೀಪ ಸ್ಥಾಪಿಸಲಾಗುತ್ತಿದೆ. ಚುನಾವಣೆಯನ್ನು ಸುಗಮವಾಗಿ ನಡೆಸಲು ಪ್ಯಾರಾ ಮಿಲಿಟರಿ ತಂಡಗಳು ದೇಶದ ಬೇರೆ ಬೇರೆ ರಾಜ್ಯಗಳಿಂದ ಹಲವಾರು ದಿನಗಳ ಪ್ರಯಾಣದ ಆಗಮಿಸುತ್ತಿದ್ದು, ದಿನಗಟ್ಟಲೆ ಚುನಾವಣಾ ಕರ್ತವ್ಯದಲ್ಲಿ ನಿರತರಾಗುತ್ತಾರೆ. ಆದರೆ ನಾವು ಮತದಾನ ಮಾಡಲು ಉದಾಸೀನತೆ ತೋರುವುದು ಸರಿಯಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗದ ಲಾಂಛನವನ್ನು ಬಿಡುಗಡೆಗೊಳಿಸಿದರು. ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧಿಕಾರಿ ಅವರು ಬೋಧಿಸಿದರು.

ಮತದಾರರ ನೋಂದಣಿ ಮತ್ತು ಮತದಾರರ ಪಾಲ್ಗೊಳ್ಳುವಿಕೆ ಕುರಿತು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News