ಮಹಿಳೆಯರು ಮುಂಚೂಣಿಯಲ್ಲಿದ್ದರೆ ಜಯ ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮಾ.2: ಸಮಾಜವನ್ನು ಪರಿವರ್ತಿಸುವ ಹೋರಾಟದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದರೆ ಜಯ ಶತಸಿದ್ಧ. ಈ ಮುಖ್ಯಪಾತ್ರವನ್ನು ಹೆಣ್ಣು ಮಕ್ಕಳಿಗೆ ಒದಗಿಸಿಕೊಡಬೇಕಾದದ್ದು ಸಮಾಜದ ಎಲ್ಲ ನಾಗರಿಕರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕೈಗಾರಿಕೆ ಇಲಾಖೆಯಿಂದ ನಗರದ ಖಾಸಗಿ ಹೊಟೇಲ್ನಲ್ಲಿ ಏರ್ಪಡಿಸಿದ್ದ ‘ವುಮನ್ ಆಫ್ ವರ್ಥ್’ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದ ಅವರು, 900 ವರ್ಷಗಳ ಹಿಂದೆಯೇ ಸಾಮಾಜಿಕ ನ್ಯಾಯ-ಪ್ರಜಾಪ್ರಭುತ್ವ ಕುರಿತು ಚಿಂತನೆಗಳು ನಡೆದಿದ್ದು, ಅಂದಿನಿಂದ ಮಹಿಳಾ ಸಮಾನತೆ, ಸಮಾನ ಅವಕಾಶಗಳಿಗೆ ಹೋರಾಟಗಳು ನಡೆದಿದ್ದವು. ಬಸವಣ್ಣ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿದ್ದರು ಎಂದು ಸ್ಮರಿಸಿದರು.
ಸ್ವಾತಂತ್ರ್ಯ ನಂತರ ಮತದಾನ ಮಾಡುವ ಹಕ್ಕು ಸಿಕ್ಕಿದರೆ ಸಾಲದು. ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯಗಳು ಮಹಿಳೆಯರಿಗೆ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಒಂದು ಅರ್ಥ ಎಂದ ಅವರು, ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಪುರುಷರಷ್ಟೇ ಮಹಿಳೆಯರಿಗೆ ಹಕ್ಕಿದೆ. ಅಧಿಕಾರ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಇದೆ. ಇದರ ಪರಿಣಾಮ ಬಿಬಿಎಂಪಿಯ 198 ಸ್ಥಾನಗಳಲ್ಲಿ 102ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಮಹಿಳೆಯರನ್ನು ನಾವಿಂದು ನೋಡಬಹುದಾಗಿದೆ. ಅದೇ ರೀತಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿಯೂ ಸ್ಥಾನ ದೊರಕಬೇಕು. ಅದಕ್ಕಾಗಿ ಮಹಿಳೆಯರ ಹೋರಾಟ ಅವಶ್ಯಕ ಎಂದು ಅವರು ಪ್ರತಿಪಾದಿಸಿದರು.
ನೀತಿ ನಿರೂಪಣೆ, ಪ್ರಮುಖ ನಿರ್ಣಯಗಳನ್ನು ಅಂಗೀಕರಿಸುವ ಆಯಕಟ್ಟಿನ ಸ್ಥಾನಗಳಲ್ಲಿ ಮಹಿಳೆಯರು ಇರಬೇಕು. ರಾಜಕೀಯ ಸ್ಥಾನಮಾನಗಳು ಮಹಿಳೆಯರಿಗೆ ಸಮಾನವಾಗಿ ಧಕ್ಕಬೇಕು ಎಂದ ಅವರು, ಕೆಲ ಸ್ವಾರ್ಥ ಮನುಷ್ಯರಿಂದ ಹೆಣ್ಣು ಭ್ರೂಣ ಹತ್ಯೆಯಂತಹ ಹೀನ ಕೃತ್ಯಗಳು ನಡೆದು ಸಮಾಜದ ಸಮತೋಲನ ತಪ್ಪುತ್ತಿದೆ. ಸಮಾಜದ ಸಮತೋಲನ ಕಾಪಾಡಿಕೊಳ್ಳಲು ನಾವೆಲ್ಲ ಪಣತೊಡಬೇಕು. ಗಂಡು ಮಕ್ಕಳ ಸಂಖ್ಯೆಯಷ್ಟೇ ಹೆಣ್ಣು ಮಕ್ಕಳ ಸಂಖ್ಯೆ ಇರಬೇಕು ಎಂದು ಹೇಳಿದರು.
ಈ ಬಾರಿ ಆಯವ್ಯಯದಲ್ಲಿ ಮಹಿಳಾ ಪ್ರಧಾನ ಕಾರ್ಯಕ್ರಮಗಳಿಗಾಗಿಯೇ 34,388 ಕೋಟಿ ರೂ.ಗಳನ್ನು ವಿವಿಧ ಇಲಾಖೆಗಳಲ್ಲಿ ನಿಗದಿಪಡಿಸಲಾಗಿದೆ ಎಂದ ಅವರು, ಮಹಿಳೆಯರು ಸ್ವಾವಲಂಬಿಗಳಾಗಲು ನಮ್ಮ ಸರಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಅಡುಗೆ ಕೋಣೆಗೆ ಸೀಮಿತವಾಗಿದ್ದ ಮಹಿಳೆಯರ ಪಾತ್ರ 21ನೆ ಶತಮಾನದಲ್ಲಿ ಕ್ರಮೇಣ ಬದಲಾಯಿತು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಯಾಗುತ್ತಿದ್ದಾರೆ ಎಂದು ಬಣ್ಣಿಸಿದರು.
ಮಹಿಳೆಯರಿಗೆ ಸಾಮಾಜಿಕ ನ್ಯಾಯ ಒದಗಿಸಲು ನಮ್ಮ ಸರಕಾರ ಶ್ರಮಿಸುತ್ತಿದ್ದು, ಇದು ನಮ್ಮ ಕರ್ತವ್ಯ. 2014 ಅಕ್ಟೋಬರ್ 17ರ ಕೈಗಾರಿಕಾ ನೀತಿಯಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನಮಾನ ನೀಡಲು ಪ್ರಯತ್ನಿಸಲಾಗಿದೆ ಎಂದ ಅವರು, ಮಹಿಳೆಯರಿಗಾಗಿಯೇ 5 ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಮಹಿಳಾ ಪ್ರಧಾನ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಸಣ್ಣ ಕೈಗಾರಿಕೆ ಸಚಿವೆ ಎಂ.ಸಿ.ಮೋಹನ್ ಕುಮಾರಿ, ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಕೆಐಎಡಿಬಿ ವ್ಯವಸ್ಥಾಪಕ ನಿರ್ದೇಶಕ ಜಯರಾಮ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಗಣನೀಯ ಸಾಧನೆಗೈದ 20 ಮಹಿಳಾ ಉದ್ದಿಮೆದಾರರನ್ನು ಸನ್ಮಾನಿಸಲಾಯಿತು.