ಅರೆಭಾಷೆ ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಬೇಕು: ಶಾಸಕ ಅಪ್ಪಚ್ಚು ರಂಜನ್
ಮಡಿಕೇರಿ, ಮಾ.2 : ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರ ಇಡೀ ವಿಶ್ವಕ್ಕೆ ಪಸರಿಸುವಂತಾಗಲಿ ಎಂದು ವಿರಾಜಪೇಟೆ ವಿಧಾನಸಭಾ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಕವನ ಕುಂಚ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಈ ಕಾರ್ಯಕ್ರಮಗಳು ರಾಜ್ಯ ಮತ್ತು ರಾಷ್ಟ್ರದೆಲ್ಲೆಡೆ ನಡೆಯುವಂತಾಗಬೇಕು ಎಂದು ಶಾಸಕರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿಯ ಮೂರು ವರ್ಷಗಳ ಕಾರ್ಯಚಟುವಟಿಕೆಗಳ ಪಕ್ಷಿನೋಟ ‘ಸಫಲ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಅರೆಭಾಷೆ ಸಂಸ್ಕೃತಿ, ನಡೆ-ನುಡಿ, ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡುವಲ್ಲಿ ಅಕಾಡೆಮಿ ಮುಂದಾಗಿದೆ. ಇಂತಹ ಕಾರ್ಯ ಚಟುವಟಿಕೆಗಳು ಇನ್ನಷ್ಟು ನಡೆಯಬೇಕಿದೆ ಎಂದು ಅವರು ಹೇಳಿದರು. ಸರ್ಕಾರ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವಂತಾಗಬೇಕು ಎಂದು ಅವರು ನುಡಿದರು.
ಯುವ ಜನರು ಮಾತೃ ಭಾಷೆಯನ್ನು ಪ್ರೀತಿಸಬೇಕು. ಮನೆ ಭಾಷೆಯನ್ನು ಉಳಿಸಿ ಬೆಳೆಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ, ಅರೆಭಾಷೆಯನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣೆಗೆಯಲ್ಲ. ಸಂಪ್ರದಾಯ ಮರೆತರೆ, ಮೂಲ ಸಂಸ್ಕೃತಿಯನ್ನು ಮರೆತಂತಾಗುತ್ತದೆ ಎಂದು ವೀಣಾ ಅಚ್ಚಯ್ಯ ಅವರು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ, 1996ರಲ್ಲಿ ಕೊಡಗು ಗೌಡ ಮಹಿಳಾ ಸಮಾಜವನ್ನು ಪ್ರಥಮವಾಗಿ ಆರಂಭಿಸಲಾಯಿತು. ಅನಂತರ ಆಕಾಶವಾಣಿಯಲ್ಲಿ ಅರೆಭಾಷೆ ಭಕ್ತಿಗೀತೆಗಳ ಕಾರ್ಯಕ್ರಾಮವನ್ನು ಆಯೋಜಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಸಹಕಾರಿಯಾಯಿತು ಎಂದು ಅವರು ತಿಳಿಸಿದರು. ಅರೆಭಾಷೆ ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಮಹಿಳೆಯರು ಮುಂದಾಗಬೇಕು. ಪೋಷಕರು ಮಕ್ಕಳಿಗೆ ಅರೆಭಾಷೆಯನ್ನು ಕಲಿಸಬೇಕು. ಅರೆಭಾಷೆ ಆಚಾರ, ವಿಚಾರ ಪದ್ಧತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಅವರು ಸಲಹೆ ಮಾಡಿದರು.
ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಎಲ್ಲಾ ಭಾಷೆಯನ್ನು ಕಲಿಯಬೇಕು. ಜೊತೆಗೆ ಜನಾಂಗದ ಭಾಷೆ, ಸಮಾಜವನ್ನು ಗೌರವಿಸಬೇಕು ಎಂದು ಅವರು ಹೇಳಿದರು.
ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಿ.ಸಿ.ಜಯರಾಮ ಅವರು ಮಾತನಾಡಿ, ಅರೆಭಾಷೆ ಅಕಾಡೆಮಿ ವತಿಯಿಂದ ಅರೆಭಾಷೆ ಪದಕೋಶ ಪುಸ್ತಕ ಹೊರತರಲು ಚಿಂತನೆ ಮಾಡಲಾಗಿದೆ. ಹಾಗೆಯೇ ಅರೆಭಾಷೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಅರೆಭಾಷೆ ಯಕ್ಷಗಾನ ತಂಡ ರಚಿಸಿ ತರಬೇತಿ ನೀಡಲು ಅಕಾಡೆಮಿ ಮುಂದಾಗಿದೆ. ಹಾಗೆಯೇ ಮಂಗಳೂರು ವಿವಿಯಲ್ಲಿ ಅರೆಭಾಷೆ ವಿದ್ಯಾಪೀಠ ಸ್ಥಾಪಿಸಲು ಮಂಗಳೂರು ವಿವಿ ಜೊತೆ ಮಾತುಕತೆ ನಡೆದಿದೆ ಎಂದು ಪಿ.ಸಿ.ಜಯರಾಮ ಅವರು ವಿವರಿಸಿದರು. ಸುಳ್ಯದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಸ್ಥೆ ಸ್ಥಾಪಿಸಲು ಚಿಂತನೆ ಮಾಡಲಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕವನ ಕುಂಚ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ರಮೇಶ್ ಜೋಯಪ್ಪ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಡೆಯುವ ಕಾರ್ಯಕ್ರಮಗಳು ಪುಸ್ತಕಗಳ ರೂಪದಲ್ಲಿ ದಾಖಲಾಗಬೇಕು ಎಂದು ಅವರು ಸಲಹೆ ಮಾಡಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಕೊಡಗು ಗೌಡ ಫೆಡರೇಷನ್ ಅಧ್ಯಕ್ಷರಾದ ಪೈಕೇರ ಮನೋಹರ ಮಾದಪ್ಪ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕುಂಜಿಲನ ಮುತ್ತಮ್ಮ ಅವರು ಮಾತನಾಡಿದರು.
ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನ ಅವರು ಇದ್ದರು. ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿದರು, ಬೇಕಲ್ ದೇವರಾಜು ನಿರೂಪಿಸಿದರು.
ಡಾ.ಕರುಣಾಕರ ನಿಡಿಂಜಿ, ಶಿವದೇವಿ ಅವನಿಶ್ಚಂದ್ರ, ಕುಲ್ಲಚನ ಕಾರ್ಯಪ್ಪ, ಎಸ್.ಕೆ.ಈಶ್ವರಿ, ತೆಕ್ಕಡೆ ಕುಮಾರಸ್ವಾಮಿ, ಗೀತಾ ಪದ್ಮನಾಭ, ಮಾಧವ ಚೆಂಬು ಬಾರಿಕೆ ಶೈಲಜಾ ಅವರು ಕವನ ವಾಚಿಸಿದರು. ಕೋಡಿ ಭರತ್ ಅವರು ಚಿತ್ರ ಬಿಡಿಸಿ ಗಮನ ಸೆಳೆದರು.