ಎಡದ ಕೈಯಲಿ ಕತ್ತಿ

Update: 2018-03-02 18:39 GMT

ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,

ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು

ಅವರ ಲಿಂಗನೆಂಬೆ, ಸಂಗನೆಂಬೆ,

ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.

                                                              -ಬಸವಣ್ಣ

ಆರ್ಥಿಕ ಮತ್ತು ಪಾರಮಾರ್ಥಿಕ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಬಸವಣ್ಣನವರು ಇಡೀ ಬದುಕನ್ನೇ ಮುಡಿಪಾಗಿಟ್ಟರು. ಈ ನವಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಒಳ್ಳೆಯವರನ್ನು ಸ್ವರ್ಗದಿಂದ ತರುವ ಕನಸು ಕಾಣಲಿಲ್ಲ. ದೇವರೇ ಬಂದು ಎಲ್ಲವನ್ನೂ ಸರಿಪಡಿಸಬೇಕೆಂದು ಪ್ರಾರ್ಥಿಸಲಿಲ್ಲ. ಒಳ್ಳೆಯವರನ್ನು ಈ ಭೂಮಿಯ ಮೇಲೆಯೇ ರೂಪಿಸಬೇಕೆಂಬುದು ಬಸವಣ್ಣನವರ ಆಶಯವಾಗಿದೆ.
 ಮಾನವನ ಒಳಗೂ ಹೊರಗೂ ಮಾನವೀಯ ಪರಿಸರ ನಿರ್ಮಾಣ ಮಾಡಿದಾಗ ಎಂಥವರೂ ಒಳ್ಳೆಯವರಾಗುತ್ತಾರೆ. ಕೆಟ್ಟ ಮನುಷ್ಯರು ಹುಟ್ಟಿನಿಂದಲೇ ಕೆಟ್ಟವರಾಗಿರುವುದಿಲ್ಲ. ಅವರಿಗೆ ಲಭ್ಯವಾಗುವ ಅನಾಗರಿಕ ವಾತಾವರಣ ಮತ್ತು ಅದರಿಂದ ರೂಪುಗೊಳ್ಳುವ ಅಸಭ್ಯ ಮನಸ್ಸಿನ ಕಾರಣ ಅವರು ಹಾಗೆ ವರ್ತಿಸುತ್ತಿರುತ್ತಾರೆ. ಮನುಷ್ಯರ ಒಳಗನ್ನು ಸ್ವಚ್ಛಗೊಳಿಸುವುದರ ಜೊತೆಗೆ ಹೊರಗಿನ ಸಮಾಜವನ್ನೂ ಸ್ವಚ್ಛಗೊಳಿಸುವುದು ಈ ಶರಣರ ಪ್ರಮುಖ ಕಾಯಕವಾಗಿದೆ. ಚಾಕು ಚೂರಿ ಹಿಡಿದುಕೊಂಡು ಮಾಂಸ ತಿನ್ನುತ್ತ ಮತ್ತು ರಸ್ತೆಯ ಮೇಲೆಯೇ ಸಾರಾಯಿ ಕುಡಿಯುತ್ತ ಬರುವವರ ವಿಕೃತ ದೃಶ್ಯವನ್ನು ನೆನಪಿಸಿಕೊಳ್ಳಲೂ ಹೇಸಿಗೆ ಎನಿಸುತ್ತದೆ. ಆದರೆ ಬಸವಣ್ಣನವರು, ದಾರಿ ತಪ್ಪಿದವರನ್ನು ಸನ್ಮಾರ್ಗಕ್ಕೆ ತರಲೇಬೇಕು ಎಂಬ ದೃಢನಿರ್ಧಾರದವರು.
ಇಷ್ಟಲಿಂಗವು ಪರಿವರ್ತನೆಯ ಸಂಕೇತ ಎಂಬ ಅವರ ನಂಬಿಕೆ ಅನನ್ಯವಾದುದು. ವ್ಯಕ್ತಿಯೊಬ್ಬ ಎಷ್ಟೇ ಅಧೋಗತಿಗೆ ಇಳಿದರೂ ಇಷ್ಟಲಿಂಗದ ಜೊತೆ ಶರಣಸಂಕುಲದಲ್ಲಿ ಬದಲಾಗುತ್ತಾನೆ ಎಂಬುದನ್ನು ಅವರು ಸಾಧಿಸಿ ತೋರಿಸಿದರು. ತಾವು ಕಂಡುಹಿಡಿದ ತತ್ತ್ವದ ಬಗ್ಗೆ ಮತ್ತು ಜನರು ಬದಲಾಗುತ್ತಾರೆ ಎಂಬ ಸತ್ಯದ ಬಗ್ಗೆ ಅವರಿಗೆ ಎಂದೂ ಸಂಶಯ ಬರಲಿಲ್ಲ. ಆ ಕಾರಣದಿಂದಲೇ ಅವರು ಜಿಗುಪ್ಸೆ ಹುಟ್ಟಿಸುವಂಥ ಜನರ ಕೊರಳಿಗೂ ಇಷ್ಟಲಿಂಗ ಕಟ್ಟಲು ಮುಂದಾದರು. ಅಷ್ಟೇ ಅಲ್ಲ ಅವರಿಗೆ ಸಾಕ್ಷಾತ್ ಕೂಡಲಸಂಗಮದೇವ ಎಂದರು. ಅವರನ್ನು ಮಾತನಾಡುವ ದೇವರುಗಳೆಂದು ಹೇಳಿದರು. ಈ ಮಾತನಾಡುವ ದೇವರುಗಳು ಬಸವಣ್ಣನವರ ಜೀವನಪ್ರೇಮವನ್ನು ಕಂಡು ದಂಗಾಗುವುದರಲ್ಲಿ ಸಂಶಯವಿಲ್ಲ.
ಬಸವಣ್ಣನವರಂಥ ಮಹಾಮಹಿಮರು ಇಷ್ಟೊಂದು ವಿಶ್ವಾಸವಿಟ್ಟು ಗೌರವ ತೋರಿಸುತ್ತಿರುವಾಗ ಮತ್ತು ಶರಣರು ಆದರ್ಶ ಸಮಾಜ ನಿರ್ಮಿಸುತ್ತಿರುವಾಗ ಆ ಸಮಾಜದಲ್ಲಿ ಘನತೆಯಿಂದ ಬದುಕುವುದಕ್ಕಿಂತ ಹೆಚ್ಚಿನ ಆನಂದವಿಲ್ಲ ಎಂಬುದರ ಅರಿವು ಆ ಜನರಿಗೆ ಬಾರದೆ ಇರದು. ಹಳೆಯ ಸಮಾಜದಲ್ಲಿ ಎಲ್ಲ ಘನತೆ ಗೌರವ ಗಳನ್ನು ಕಳೆದುಕೊಂಡ ಅವರು ಹೊಸ ಸಮಾಜದಲ್ಲಿ ಹೊಸ ಬದುಕನ್ನು ಪಡೆದು ಶಿವಸ್ವರೂಪಿಗಳಾಗಿ ಬದುಕುವುದನ್ನು ಅದು ಹೇಗೆ ನಿರಾಕರಿಸುತ್ತಾರೆ? ಇದೇ ಬಸವಣ್ಣನವರ ಮಹಾಸಾಧನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News