ಬಿಜೆಪಿಯದ್ದು ಕೊಲೆಗಳ ವರ್ಗೀಕರಣದ ಯಾತ್ರೆ: ತೆನ್ನಿರ ಮೈನಾ

Update: 2018-03-03 11:25 GMT

ಮಡಿಕೇರಿ, ಮಾ.3: ಕುಶಾಲನಗರದಿಂದ ಮಂಗಳೂರಿಗೆ ಹೊರಟಿರುವ ಬಿಜೆಪಿಯ ಯಾತ್ರೆ ಜನ ಸುರಕ್ಷಾ ಯಾತ್ರೆಯಲ್ಲ, ಬದಲಿಗೆ ಕೊಲೆಗಳ ವರ್ಗೀಕರಣದ ಯಾತ್ರೆ ಎಂದು ಕೊಡಗು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ತೆನ್ನಿರ ಮೈನಾ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿ, ಜನರ ದಿಕ್ಕು ತಪ್ಪಿಸಲು ಯಾತ್ರೆಯ ಕುತಂತ್ರ ಹೆಣೆದಿದೆ ಎಂದು ಟೀಕಿಸಿದ್ದಾರೆ. ಹತ್ಯೆ ಮಾಡುವುದು ಮಹಾ ಅಪರಾಧವಾಗಿದ್ದು, ಆರೋಪಿಗಳಿಗೆ ಕಾನೂನಿನಡಿ ಶಿಕ್ಷೆಯಾಗಬೇಕು. ಆದರೆ ಬಿಜೆಪಿ ಕೊಲೆಗಳನ್ನು ಕೂಡ ಜಾತಿಯಾಧಾರಿತವಾಗಿ ವರ್ಗೀಕರಣ, ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು. ಹಿಂದೂ ಕೊಲೆ, ಮುಸ್ಲಿಂ ಕೊಲೆ, ಕ್ರಿಶ್ಚಿಯನ್ ಕೊಲೆ, ಆರೆಸ್ಸೆಸ್ ಕೊಲೆ, ಬಿ.ಜೆ.ಪಿ ಕೊಲೆ, ಕಾಂಗ್ರೆಸ್ ಕೊಲೆ, ಜೆಡಿಎಸ್ ಕೊಲೆ ಎಂದು ವರ್ಗೀಕರಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ದೇಶದಲ್ಲಿ ಕೊಲೆ ಸಂಸ್ಕೃತಿಯನ್ನು ಪರಿಚಯಿಸಿದ ಕೀರ್ತಿ ಬಿ.ಜೆ.ಪಿ.ಯ ಪೂರ್ವಾಶ್ರಮದವರಿಗೆ ಸಲ್ಲುತ್ತದೆ ಎಂದು ತೆನ್ನಿರ ಮೈನಾ ಆರೋಪಿಸಿದ್ದಾರೆ.

ಬಿಜೆಪಿ ಕೃಪಾ ಪೋಷಿತ ನಾಟಕಗಳನ್ನು ನೋಡಿ ರಾಜ್ಯದ ಜನತೆಗೆ ಸಾಕಾಗಿದೆ. ಬದುಕಿರುವ ಜನರ ಭಾವನೆಗಳನ್ನು, ಅಭಿಪ್ರಾಯಗಳನ್ನು ಕಡೆಗಣಿಸಿ ಸತ್ತವರ ಮನೆಯನ್ನು ಹುಡುಕಿಕೊಂಡು ಹೋಗಿ ಮೊಸಳೆ ಕಣ್ಣೀರು ಸುರಿಸುವುದು ಬಿಜೆಪಿಯ ಸಂಪ್ರದಾಯವಾಗಿದೆ ಎಂದು ಟೀಕಿಸಿದ್ದಾರೆ. ಅಭಿವೃದ್ಧಿ ವಿಚಾರಗಳನ್ನು ಮಾತ್ರ ಪರಿಗಣಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಜನರು ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News