ಮಡಿಕೇರಿ: ಸಂಗೀತಾ ರವಿರಾಜ್‍ಗೆ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಪ್ರದಾನ

Update: 2018-03-05 17:44 GMT

ಮಡಿಕೇರಿ, ಮಾ.5: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯನ್ನು ಸಾಹಿತಿ ಸಂಗೀತಾ ರವಿರಾಜ್ ಅವರಿಗೆ ಪ್ರದಾನ ಮಾಡಲಾಯಿತು.  

ನಗರದ ಸರಸ್ವತಿ ಡಿ.ಎಡ್.ಡಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಶಾಲು, ಫಲ, ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಲಾಯಿತು.  

ಬಳಿಕ ಮಾತನಾಡಿದ ಸಂಗೀತಾ ರವಿರಾಜ್,ಮೌಲ್ಯಯುತ ಬರಹಗಳು ಹೆಚ್ಚಾಗಬೇಕು. ಹಾಗಾದಾಗ ಮಾತ್ರ ಸಮಾಜದಲ್ಲಿ ಹೊಸ ಅಲೆ ಸೃಷ್ಟಿಸಿ ಸೃಜನಶೀಲ ಬರಹ ಕಾಣಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಹಿಂದೆ ಸಾಹಿತ್ಯ ಕ್ಷೇತ್ರ ಬರಹಗಳು ಸಮಾಜದ ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದವು. ಅ ನಿಟ್ಟಿನಲ್ಲಿ ಬರಹಗಳು ಬರಬೇಕು. ಇನ್ನೂ ಉತ್ತಮ ಸಾಹಿತ್ಯ ರಚನೆ ಮಾಡಬೇಕು. ಕೊಡಗಿನ ಗೌರಮ್ಮ ಪುಸ್ತಕಗಳನ್ನು ಮರು ಮುದ್ರಣ ಮಾಡುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಾಗಬೇಕಿದೆ ಎಂದು ಅವರು ಸಲಹೆ ಮಾಡಿದರು. 

ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ಅವರು ಮಾತನಾಡಿ, ಸಾಹಿತ್ಯ ಮನಸ್ಸಿನ ನೋವನ್ನು ಮರೆಸುತ್ತದೆ. ಬರವಣಿಗೆ ಮೂಲಕ ಸಮಾಜದ ಆಗುಹೋಗುಗಳನ್ನು ದಾಖಲಿಸಲು ಸಹಕರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೊಡಗಿನ ಗೌರಮ್ಮ ಅವರು ಹಲವು ಕಥೆ, ಕವನ ಬರೆಯುವ ಮೂಲಕ ಇಡೀ ಸಮಾಜದ ಅಂಕುಡೊಂಕುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಯುವ ಜನರು ಸಾಹಿತ್ಯದ ರುಚಿ, ರಸ ಮತ್ತು ಒಲವನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದರು.   

ಸ್ಮಿತ ಅಮೃತರಾಜ್ ಅವರು ಮಾತನಾಡಿ, ಗೌರಮ್ಮ ಕಥೆಗಳು ಪ್ರಶಸ್ನಿಸುವ, ಪ್ರತಿಭಟಿಸುವ ಹಾಗೂ ಸಮಾಜದ ಓರೆಕೋರೆಗಳನ್ನು ಸಾಹಿತ್ಯದ ಮೂಲಕ ಅವರು ಬೆಳಕು ಚೆಲ್ಲಿದ್ದಾರೆ ಎಂದು ಅವರು ಹೇಳಿದರು. 

ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕುಮಾರ್ ಅವರು ಮಾತನಾಡಿ, ಸಮಾಜದ ನ್ಯೂನತೆಗಳನ್ನು ಸಾಹಿತ್ಯ ಮೂಲಕ ಗಮನ ಸೆಳೆಯಬಹುದಾಗಿದೆ. ಆ ನಿಟ್ಟಿನಲ್ಲಿ ಕೊಡಗಿನ ಗೌರಮ್ಮ ಅವರ ಕೃತಿಯನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ಮಾಡಿದರು. 

ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಆನಂತಶಯನ ಅವರು ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಬರವಣಿಗೆ ಬೆಳೆಸಿಕೊಳ್ಳಬೇಕು ಹಾಗೂ ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಹಾಗೆಯೇ ವೈಜ್ಞಾನಿಕ ಬರಹಗಳು ಬರಬೇಕು ಎಂದು ಅವರು ಹೇಳಿದರು.

ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಮಾತನಾಡಿ, ಮಾರ್ಚ್ 5 ಕೊಡಗಿನ ಗೌರಮ್ಮ ಅವರು ಹುಟ್ಟಿದ ದಿನವಾಗಿದ್ದು, ಸಾಹಿತ್ಯ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.  

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮೂಲಕ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.  

ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಮಾತನಾಡಿದರು, ವಿದ್ಯಾರ್ಥಿಗಳಾದ ಸಿರಿಗೌರಿ(ಪ್ರಥಮ), ಐಶ್ವರ್ಯ(ದ್ವಿತೀಯ), ವಿಶಾಂಕ್( ತೃತೀಯ), ಶ್ರಾವಣಿ(ಸಮಾಧಾನಕರ ಬಹುಮಾನ) ನೀಡಲಾಯಿತು. ಕಿಶನ್ ಪೂವಯ್ಯ, ದಿವಾಕರ ಇತರರು ಇದ್ದರು. ಕೆ.ಎಸ್. ರಮೇಶ್ ಸ್ವಾಗತಿಸಿದರು. ಸುನಿತಾ ನಿರೂಪಿಸಿದರು, ಮುರಳೀಧರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News