ತಿಗಳ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕಿದೆ: ಟಿ.ಬಿ.ಜಯಚಂದ್ರ

Update: 2018-03-08 13:09 GMT

ತುಮಕೂರು,ಮಾ.08: ತಿಗಳ ಸಮುದಾಯ ಕೃಷಿ ಮತ್ತು ತೋಟಗಾರಿಕೆಯಲ್ಲಿ ಜೀವನ ಕಂಡುಕೊಂಡಂತೆ ಶೈಕ್ಷಣಿಕವಾಗಿಯೂ ಬೆಳವಣಿಗೆ ಹೊಂದುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ತಿಗಳರ ಕ್ಷೇಮಾಭಿವೃದ್ದಿ ಸಂಘ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ತಿಗಳ ಸಮಾಜದ ಜಾಗೃತ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಇಂದು ಪಿ.ಆರ್.ರಮೇಶ್ ಅವರಾಗಲಿ, ನೆ.ಲ.ನರೇಂದ್ರಬಾಬು ಅವರಾಗಲಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರು ಗಳಿಸಿರುವ ವಿದ್ವತ್ ಕಾರಣ. ಆದ್ದರಿಂದ ಕೃಷಿ, ತೋಟಗಾರಿಕೆ ಜೊತೆಗೆ, ಶೈಕ್ಷಣಿಕವಾಗಿ ಮುಂದೆ ಬರಲು ಈ ಸಮಾಜ ಪ್ರಯತ್ನಿಸಬೇಕೆಂದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಅಲಕ್ಷಿತ, ಶೋಷಿತ ಸಮುದಾಯಗಳನ್ನು ಗುರುತಿಸಿ ಅವರಿಗೆ ರಾಜಕೀಯ ಸ್ಥಾನಮಾನ ನೀಡಲಾಗಿದೆ. ಆದರೆ ತಮ್ಮ ಸಮುದಾಯಕ್ಕೆ ನೀಡಿದ ಸ್ಥಾನಮಾನವನ್ನು ಗುರುತಿಸಿ, ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಏಕೈಕ ಸಮಾಜವೆಂದರೆ ತಿಗಳ ಸಮುದಾಯ. ಕಾಯಕವೇ ಕೈಲಾಸ ಎಂಬಂತೆ ದುಡಿದು ತಿನ್ನುವ ಈ ಸಮುದಾಯಕ್ಕೆ ಸರಕಾರ ಕಳೆದ ಐದು ವರ್ಷಗಳಲ್ಲಿ ಹಲವಾರು ಅನುಕೂಲಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಸುಮಾರು 1 ಎಕರೆ ಜಾಗವನ್ನು ಕರ್ನಾಟಕ ತಿಗಳರ ಸಂಘಕ್ಕೆ ನೀಡಿದೆ. ಜನಾಂಗದ ಕೋರಿಕೆಯಂತೆ ಪಿ.ಆರ್.ರಮೇಶ್ ಅವರನ್ನು ಎಂ.ಎಲ್.ಸಿ.ಯಾಗಿ ಮತ್ತು ತುಮಕೂರಿನ ರೇವಣ್ಣ ಸಿದ್ದಯ್ಯ ಅವರನ್ನು ಕರ್ನಾಟಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಪ್ತು ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಸರಕಾರದ ಈ ಕಾರ್ಯವನ್ನು ಸ್ಮರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಟಿ.ಬಿ.ಜಯಚಂದ್ರ ನುಡಿದರು.

ಕೈಗಾರಿಕೆಗಳು ಹೆಚ್ಚಾದಂತೆ ತಿಗಳ ಸಮುದಾಯ ತರಕಾರಿ ಬೆಳೆಯಲು ಭೂಮಿಯ ಕೊರತೆ ಉಂಟಾಗುತ್ತಿದೆ. ತುಮಕೂರು ಜಿಲ್ಲೆ ಭಾರತದಲ್ಲಿಯೇ ದೊಡ್ಡ ಕೈಗಾರಿಕಾ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಇದರ ಪರಿಣಾಮ ತಿಗಳ ಸಮುದಾಯದ ಅರ್ಥಿಕತೆಗೆ ಹೊಡೆತ ಬಿಳುತ್ತಿದೆ. ಇದರಿಂದ ಹೊರಬೇಕೆಂದರೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಅವರು ಸರಕಾರ ಉದ್ಯೋಗಗಳನ್ನು ಪಡೆಯುವಂತೆ ಮಾಡಿಬೇಕಾದ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ. ರಾಜಕೀಯ, ಅರ್ಥಿಕ, ಶೈಕ್ಷಣಿಕ ಸಬಲತೆಯನ್ನು ಕಂಡುಕೊಳ್ಳಲು ಶಿಕ್ಷಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನಾಂಗದ ಮುಖಂಡರು ಜಾಗೃತಿ ಮೂಡಿಸಬೇಕೆಂದು ಸಚಿವ ಜಯಚಂದ್ರ ತಿಳಿಸಿದರು.

ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಸರಕಾರ ತಿಗಳ ಸಮುದಾಯವನ್ನು ಗುರುತಿಸಿ ರಾಜಕೀಯ ಸ್ಥಾನಮಾನ ಕಲ್ಪಿಸಿಕೊಡುವ ಮೂಲಕ ಅವರ ಅಭಿವೃದ್ದಿಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಧಿಕಾರ ದೊರೆಯಲಿದೆ. ಪಿ.ಆರ್.ರಮೇಶ್ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ದಿಬ್ಬೂರಿನಲ್ಲಿ ಸುಮಾರು 1200 ಮನೆಗಳು ಹಾಗೂ ನಗರದ ವಿವಿಧ 6 ಕೊಳಗೇರಿಗಳಲ್ಲಿ 1500ಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕಾಗಿ ತುಮಕೂರು ನಗರಕ್ಕಾಗಿ 160 ಕೋಟಿಗೂ ಹೆಚ್ಚು ಹಣ ನೀಡಿದರು. ದಿಬ್ಬೂರಿನ ಮನೆಗಳಲ್ಲಿ ತಿಗಳ ಸಮುದಾಯಕ್ಕು ಹೆಚ್ಚಿನ ಮನೆಗಳನ್ನು ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.

ಕರ್ನಾಟಕ ತಿಗಳರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಎ.ಹೆಚ್.ಬಸವರಾಜು ಮಾತನಾಡಿ, ಕಾಂಗ್ರೆಸ್ ಸರಕಾರದ ಮುಂದೆ ಸಮುದಾಯ ಇರಿಸಿದ್ದ 6 ಬೇಡಿಕೆಗಳಲ್ಲಿ ಎರಡನ್ನು ಮಾತ್ರ ಈಡೇರಿಸಿದೆ. ಉಳಿದವುಗಳನ್ನು ಈಡೇರಿಸಲು ಪ್ರಯತ್ನಿಸ ಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ತಿಗಳ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಹಾಸ್ಟಲ್ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿಗಣೇಶ್, ಎಂ.ಎಲ್.ಸಿ. ಪಿ.ಆರ್.ರಮೇಶ್, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ರೇವಣಸಿದ್ದಯ್ಯ, ತಿಗಳರ ಸಂಘದ ಅಧ್ಯಕ್ಷ ಸುಬ್ಬಣ್ಣ,ನೆ.ಲ.ನರೇಂದ್ರಬಾಬು ಮಾತನಾಡಿದರು.

ವೇದಿಕೆಯಲ್ಲಿ ಮುಖಂಡ ರಾದ ಕೆಂಪಯ್ಯ,ಸಿದ್ದಗಂಗಯ್ಯ,ಚೌದ್ರಿ ರಂಗಪ್ಪ, ಎನ್.ಆರ್.ಜಯರಾಮ್, ರಾಜಶೇಖರ್,ಗೋಪಾಲ್,ಕಮಲ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News