ಶಿವಮೊಗ್ಗ: ಪ್ರೀತಿಸಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕ; ಆತ್ಮಹತ್ಯೆಗೆ ಶರಣಾದ ಯುವತಿ

Update: 2018-03-17 15:44 GMT

ಶಿವಮೊಗ್ಗ, ಮಾ.17: ಪ್ರೀತಿಸುವಂತೆ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಯುವಕನ ಕಾಟದಿಂದ ಬೇಸತ್ತು ಯುವತಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ವೆಂಕಟೇಶ ನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. 

ಚೇತನ (19) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ. ಇವರು ಮಾಚೇನಹಳ್ಳಿಯಲ್ಲಿರುವ ಬಿಪಿಓ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಪ್ರಸಾದ್‍ರವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರಣವೇನು?: ಶ್ರೀನಿವಾಸ ಯಾನೆ ಸೀನ (22) ಆರೋಪಿಯಾಗಿದ್ದಾನೆ. ಈತ ಹಾಗೂ ಚೇತನಾ ಒಂದೇ ಕಾಲೇಜ್‍ನಲ್ಲಿ ಈ ಹಿಂದೆ ಅಭ್ಯಾಸ ನಡೆಸುತ್ತಿದ್ದರು. ಅಂದಿನಿಂದಲೂ ಈತ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಚೇತನಾಗೆ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ಚೇತನ ಒಪ್ಪಿರಲಿಲ್ಲ. ಮಗಳಿಗೆ ತೊಂದರೆ ಕೊಡದಂತೆ ಚೇತನಾ ತಾಯಿಯು ಇತ್ತೀಚೆಗೆ ಆರೋಪಿಗೆ ತಾಕೀತು ಮಾಡಿದ್ದರು. 

ಇದರ ನಂತರವೂ ಆರೋಪಿಯ ಪೀಡನೆ ಮುಂದುವರಿದಿತ್ತು. ಇದರಿಂದ ಮನನೊಂದ ಚೇತನ ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾನು ಬಾಡಿಗೆಗಿದ್ದ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಮಾಹಿತಿ ಅರಿತ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News