ಮೈಸೂರು: ಕನ್ನಡ ವಿದ್ವಾಂಸ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ ನಿಧನ

Update: 2018-03-23 16:51 GMT

ಮೈಸೂರು,ಮಾ.23: ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ, ವಿದ್ವಾಂಸ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ (63) ಅವರು ಉಪನ್ಯಾಸ ನೀಡುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಶುಕ್ರವಾರ ನಿಧನರಾದರು. 

ಜಯಲಕ್ಷ್ಮೀಪುರಂನ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಬಿಎಂಶ್ರೀ ನೆನಪು ಕಾರ್ಯಕ್ರಮದಲ್ಲಿ ಬಿ.ಎಂ.ಶ್ರೀಕಂಠಯ್ಯನವರ ವಿಮರ್ಶೆ ವಿಚಾರ ಕುರಿತು ಉಪನ್ಯಾಸ ನೀಡುತ್ತಿದ್ದರು. ಕುಸಿದು ಬಿದ್ದ ಅವರನ್ನು ತಕ್ಷಣವೇ ಕಾಲೇಜಿನ ಸಮೀಪದಲ್ಲಿಯೇ ಇರುವ ಚಂದ್ರಕಲಾ ಆಸ್ಪತ್ರೆಗೆ ಕರೆದ್ಯೊಯಲಾಯಿತು. ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. 

ಬಳಿಕ ರೂಪನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕುಟುಂಬದವರು ಹಾಗೂ ಸ್ನೇಹಿತರು ಅಂತಿಮ ದರ್ಶನ ಪಡೆದು ಶೋಕ ವ್ಯಕ್ತಪಡಿಸಿದರು. ಪತ್ನಿ ಕಮಲವಾಣಿ, ಅವಳಿ ಪುತ್ರಿಯರಾದ ಸಿಂಧು, ಬಿಂದು, ಸ್ನೇಹಿತರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.  

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಜ್ಜನಾಡು ಗ್ರಾಮದವರಾದ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ ಅವರು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 1999ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಆಗಿ ಸೇರಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. 

ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಮತ್ತು ಆಳವಾಗಿ ಅಧ್ಯಯನ ಮಾಡಿರುವ ಹೊಸ ಸಂವೇದನೆಯ ವಿದ್ವಾಂಸರಾಗಿದ್ದ ತಿಪ್ಪೇಸ್ವಾಮಿ ಅವರು ವಿಮರ್ಶಕರಾಗಿ ಜಾನಪದ ಕ್ಷೇತ್ರದಲ್ಲಿಯೂ ಪ್ರಸಿದ್ಧಿ ಪಡೆದಿದ್ದರು. ಅವರ ನಿಧನಕ್ಕೆ ಸಾಹಿತ್ಯಲೋಕ ಕಂಬನಿ ಮಿಡಿದಿದೆ.

ವಿಮರ್ಶ ಕೃತಿಗಳು: ಪ್ರಸ್ತಾಪ, ಪ್ರಣೀತ, ಅಭಿಮುಖ, ಜಾನಪದ ಕೃತಿಗಳು: ಬಂದೀರೆ ನನ್ನ ಜಡೆವೊಳಗೆ, ಕೋಲಾರಮ್ಮ, ದಾಸ ಸಾಹಿತ್ಯ ಮತ್ತು ಜಾನಪದ. ವ್ಯಕ್ತಿಚಿತ್ರಗಳು: ಕನ್ನಡ ನಾಡಿನ ಕಲಾವಿದರು, ಬಾಲಣ್ಣ-ಭಾಗವತರು: ಜೀವನ ಕಥೆ, ಪ್ರಶಸ್ತಿ ಪಡೆದ ಮಹನೀಯರು. ಸಾಹಿತ್ಯ 
ವಾಚಿಕೆ: ಜಿ.ವೆಂಕಟಯ್ಯ. 

ಸಂಪಾದಿತ ಕೃತಿಗಳು: ಅಗ್ನಿಸಾಕ್ಷಿ, ಕಮಲಾ ಕೃತಿ ವಿಮರ್ಶೆ, ಕುಮಾರವ್ಯಾಸ(ವಿರಹಗಳ ಶೃಂಗಾರ), ಮೂಡಲ ವೈಭವ(ಲೇಖನಗಳ ಸಂಕಲನ), ಹೊಂಗಿರಣ, ಸಿರಿನಂದಿ (ಸ್ಮರಣ ಸಂಚಿಕೆ) ಸೇರಿದಂತೆ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. 

ಅಂತಿಮ ದರ್ಶನ: ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಪ್ರೀತಿ ಶ್ರೀಮಂಧರ್ ಕುಮಾರ್, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ ಪ್ರೊ.ಹನೂರು ಕೃಷ್ಣಮೂರ್ತಿ, ಪ್ರೊ.ಸಿ.ಪಿ.ಸಿದ್ಧಾಶ್ರಮ, ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ಎನ್.ಎಂ.ತಳವಾರ್, ಪ್ರೊ.ಎಂ.ಎಸ್.ಶೇಖರ್, ಪ್ರೊ.ನಂಜಯ್ಯ ಹೊಂಗನೂರು, ಡಾ.ಆರ್.ರಾಮಕೃಷ್ಣ, ಡಾ.ಎನ್.ಕೆ.ಲೋಲಾಕ್ಷಿ ಮುಂತಾದವರು ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News