ಶಿವಮೊಗ್ಗ: ನಾಪತ್ತೆಯಾಗಿದ್ದ ಬಾಲಕನ ಶವ ತುಂಗಾ ನದಿಯಲ್ಲಿ ಪತ್ತೆ

Update: 2018-03-29 16:07 GMT

ಶಿವಮೊಗ್ಗ, ಮಾ. 29: ಇತ್ತೀಚೆಗೆ ನಗರದ ಹೊರವಲಯ ತ್ಯಾವರೆಚಟ್ನಹಳ್ಳಿ ಗ್ರಾಮದಲ್ಲಿ ಮನೆಯ ಮುಂಭಾಗ ಆಟವಾಡುವ ವೇಳೆ ನಿಗೂಢವಾಗಿ ಕಣ್ಮರೆಯಾಗಿದ್ದ ಬಾಲಕನ ಶವ ತುಂಗಾ ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. 

ಶಿವರಾಜ್ ಹಾಗೂ ಕವಿತಾ ದಂಪತಿಯ ಪುತ್ರ ನೂತನ್ (7) ನಿಗೂಢವಾಗಿ ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ. ಈತ ಮಾ. 21 ರಂದು ಮನೆಯ ಮುಂದೆ ಆಟವಾಡುವ ಸಂದರ್ಭದಲ್ಲಿ ಕಣ್ಮರೆಯಾಗಿದ್ದ. ಎಲ್ಲಿಯೂ ಬಾಲಕನ ಸುಳಿವು ಲಭ್ಯವಾಗಿರಲಿಲ್ಲ. ಈ ಕುರಿತಂತೆ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಮಂಗಳವಾರ ಬಾಲಕನ ಶವ ತುಂಗಾ ನಾಲೆಯಲ್ಲಿ ಪತ್ತೆಯಾಗಿದೆ. ಬಾಲಕನ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆ ಪೂರ್ಣಗೊಂಡ ನಂತರವಷ್ಟೆ ಬಾಲಕನ ಸಾವಿಗೆ ಸ್ಪಷ್ಟ ಕಾರಣವೆನೆಂಬುವುದು ತಿಳಿದುಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News