ಮೈಸೂರು: ನವದಂಪತಿಗೆ ಮನೆಯವರಿಂದಲೇ ಕೊಲೆ ಬೆದರಿಕೆ; ರಕ್ಷಣೆಗೆ ಪೊಲೀಸರ ಮೊರೆ ಹೋದ ಪ್ರೇಮಿಗಳು
ಮೈಸೂರು,ಮಾ.29: ಮನೆಯವರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನನ್ನು ವರಿಸಿದ ಯುವತಿಗೆ ಮನೆಯವರೇ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು, ಜೋಡಿಯೀಗ ರಕ್ಷಣೆಗಾಗಿ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ದೊಡ್ಡಕಲ್ಲಸಂದ್ರ ನಿವಾಸಿ ವೀಣಾ ಹಾಗೂ ಮೈಸೂರು ದಟ್ಟಗಳ್ಳಿ ನಿವಾಸಿ ನಿತಿನ್ ಕುಮಾರ್ ಎಂಬವರೇ ಪ್ರೀತಿಸಿ ವಿವಾಹವಾಗಿದ್ದು, ಕಳೆದ 6 ತಿಂಗಳಿನಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಜಾತಿ ಬೇರೆ ಆಗಿದ್ದ ಕಾರಣ ವೀಣಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧವನ್ನು ಲೆಕ್ಕಿಸದ ವೀಣಾ ನಾಲ್ಕು ದಿನಗಳ ಹಿಂದೆ ಶ್ರೀ ರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ನಿತಿನ್ ನನ್ನು ಮದುವೆಯಾಗಿ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಳು.
ಮದುವೆ ಆದ ಸುದ್ದಿ ತಂದೆ ಮಾಯಿಗೌಡಗೆ ತಿಳಿದು ಆಕೆಯ ಪತಿಯ ಮನೆಗೆ ರೌಡಿಗಳನ್ನು ಕಳುಹಿಸಿ ಗಲಾಟೆ ಮಾಡಿಸಿದ್ದಲ್ಲದೇ, ನಿತಿನ್ ಕುಮಾರ್ ಮೇಲೆ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ತಂದೆಯಿಂದ ಇಬ್ಬರಿಗೂ ಕೊಲೆ ಬೆದರಿಕೆ ಬಂದಿದೆ ಎಂದು ಆರೋಪಿಸಿರುವ ವೀಣಾ ತನ್ನ ಗಂಡನ ಜೊತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ರಕ್ಷಣೆ ನೀಡುವಂತೆ ದೂರು ನೀಡಿದ್ದಾಳೆ. ಮುಂದೆ ತಮಗೇನಾದರೂ ಅಪಾಯವಾದರೆ ತಮ್ಮ ತಂದೆ ಮಾಯೀಗೌಡ ಕಾರಣವಾಗುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾಳೆ