×
Ad

ಮಡಿಕೇರಿ: ವಿಧಾನಸಭಾ ಚುನಾವಣೆ ಕುರಿತು ಮಾಹಿತಿ ಕಾರ್ಯಾಗಾರ

Update: 2018-03-29 23:04 IST

ಮಡಿಕೇರಿ, ಮಾ.29: ವಿಧಾನಸಭಾ ಚುನಾವಣೆ ಸಂಬಂಧ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಕಾರ್ಯ ಚಟುವಟಿಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡುವ ಕಾರ್ಯಗಾರವು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ಪತ್ರಕರ್ತರಿಗೆ ಪ್ರತ್ಯೇಕವಾಗಿ ನಡೆಯಿತು.  

ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಜೊತೆಗೆ ಮತದಾನ ಮಾಡಿರುವುದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಬಳಕೆಗೆ ಬಂದಿದೆ. ವಿವಿಪ್ಯಾಟ್‍ನಿಂದ ಮತದಾರರು ತಮ್ಮ ಮತವನ್ನು ಯಾರಿಗೆ ಚಲಾಯಿಸಲಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ.  ವಿವಿ ಪ್ಯಾಟ್ ಕಾರ್ಯನಿರ್ವಹಣೆ, ಮತದಾನ ಆರಂಭ, ಮುಕ್ತಾಯ, ಒಟ್ಟು ಅಭ್ಯರ್ಥಿಗಳು, ಮತದಾನವಾಗಿರುವುದು, ಅಭ್ಯರ್ಥಿಗಳು ಪಡೆದ ಮತಗಳು ಹೀಗೆ ಹಲವು ಮಾಹಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಲಾಯಿತು. 

ವಿವಿಪ್ಯಾಟ್ ಮೂಲಕ ಮತದಾರರು ತಾನು ಚಲಾಯಿಸಿದ ಮತವನ್ನು ಏಳು ಸೆಕೆಂಡುಗಳ ಕಾಲ ವೀಕ್ಷಿಸಬಹುದಾಗಿದೆ. ವಿವಿಪ್ಯಾಟ್ ಏಳು ಬಗೆಯ ಸೆನ್ಸಾರ್ ಗಳನ್ನು ಒಳಗೊಂಡಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದರು. 

ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಮೊದಲು ಎಲ್ಲಾ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಅಣಕು ಮತದಾನ ಮಾಡಲಾಗುತ್ತದೆ. ಯಾವುದೇ ಸಂದೇಹವಿದ್ದರೂ ಮತಯಂತ್ರ ಬದಲಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮಾದರಿ ನೀತಿ ಸಂಹಿತೆ ಸಂಬಂಧಿಸಿದಂತೆ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ಜಾಹೀರಾತುಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಸಮಿತಿಯ ಗಮನಕ್ಕೆ ತಂದು ಪ್ರಕಟಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಯಾವುದೇ ಜಾಹೀರಾತುಗಳು ವೈಯಕ್ತಿಕ, ಪ್ರಚೋದಾನ್ಮಾತಕ ಅಥವಾ ಧಾರ್ಮಿಕ ನಿಂದನಾ ಬರಹಗಳನ್ನು ಒಳಗೊಂಡಿರಬಾರದು. ಆ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಆಯೋಜಿಸಲಾಗುತ್ತದೆ. ಆ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ 18 ವರ್ಷ ಪೂರ್ಣಗೊಂಡಿರುವವರು, ತಮ್ಮ ಹೆಸರು ಸೇರ್ಪಡೆಗೆ ಇನ್ನೂ ಅವಕಾಶವಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ಅವರು ಜಾಹೀರಾತುಗಳ ದೃಢೀಕರಣ ಸಂಬಂಧ ವಿಳಂಬ ಮಾಡಬಾರದು ಎಂದು ಕೋರಿದರು.  

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.      

ಪತ್ರಕರ್ತರಾದ ಅನಿಲ್ ಎಚ್.ಟಿ.ಐತಿಚಂಡ ರಮೇಶ್ ಉತ್ತಪ್ಪ, ಸವಿತಾ ರೈ, ಆನಂದ್ ಕೊಡಗು ಇತರರು ಚುನಾವಣಾ ಜಾಹೀರಾತು, ಸಂದರ್ಶನ ಮತ್ತಿತರ ಬಗ್ಗೆ ಮಾಹಿತಿ ಪಡೆದರು.  

ರಾಜಕೀಯ ಪಕ್ಷಗಳ ಪ್ರಮುಖರಾದ ಸಜಿಲ್ ಕೃಷ್ಣ, ತನ್ನೇರಾ ಮೈನಾ, ಪ್ರೇಮಕುಮಾರ್ ಅವರು ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಕಾರ್ಯ ಚಟುವಟಿಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾಹಿತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News