ಮಂಡ್ಯ: ಮಾ.31 ರಂದು ಜಿಲ್ಲೆಗೆ ಅಮಿತ್ ಶಾ ಭೇಟಿ
ಮಂಡ್ಯ, ಮಾ.29: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾ.31 ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ ನಾರಾಯಣ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ಕ್ಕೆ ಶ್ರೀರಂಗಪಟ್ಟಣ ಚನ್ನೇನಹಳ್ಳಿ ಗ್ರಾಮದಲ್ಲಿ ಮುಷ್ಠಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಿ, ಆತ್ಮಹತ್ಯೆ ಮಾಡಿಕೊಂಡ ರೈತ ರಾಜೇಂದ್ರಪ್ಪ ಕುಟುಂಬದವರಿಗೆ ಸಾಂತ್ವನ ಹೇಳುವರು ಎಂದರು.
ನಂತರ, ಬೆಳಗ್ಗೆ 10.35ಕ್ಕೆ ಮೇಲುಕೋಟೆಗೆ ತೆರಳಿ ಶ್ರೀ ಚಲುವರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12.10ಕ್ಕೆ ಮಂಡ್ಯದ ಸರ್.ಎಂ.ವಿ.ಕ್ರೀಡಾಂಗಣದಲ್ಲಿ ನಡೆಯುವ ಸಾವಯವ ಕೃಷಿಕರ ರೈತಗಳ ಕೂಟ ಮತ್ತು ಕೀರೆಮಡಿ ಮಹಿಳಾ ಕೂಟದವರೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ವಿಜಯಕುಮಾರ್, ಮಲ್ಲಿಕಾರ್ಜುನ, ಎಚ್.ಆರ್.ಅರವಿಂದ, ಮಧುಚಂದನ್, ಕಾರಸವಾಡಿ ಮಹದೇವು, ಸುರೇಶ್, ಕೆ.ಎಸ್.ನಂಜುಂಡೇಗೌಡ, ಎಚ್.ಎನ್.ಮಂಜುನಾಥ್ ಉಪಸ್ಥಿತರಿದ್ದರು.