ಮಂಡ್ಯ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಮಂಡ್ಯ, ಮಾ.30: ಪತಿಯ ಅನುಮಾನ ಹಾಗೂ ಹಣಕಾಸಿನ ಬಿಕ್ಕಟ್ಟಿನಿಂದ ಮನನೊಂದು ಮಹಿಳೆಯೊಬ್ಬಳು ಡೆತ್ನೋಟ್ ಬರೆದಿಟ್ಟು ತನ್ನ ಇಬ್ಬರು ಮಕ್ಕಳೊಡನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಗುಳಘಟ್ಟ ಗ್ರಾಮದಲ್ಲಿ ನಡೆದಿದೆ.
ಜಗದೀಶ್ ಪತ್ನಿ ಸುನೀತಾ(30), ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿದ್ದ ಪುತ್ರಿ ಪ್ರಿಯಾಂಕ(15) ಹಾಗೂ 7ನೆ ತರಗತಿ ಓದುತ್ತಿದ್ದ ಪುತ್ರ ಪ್ರಜ್ವಲ್(13) ಆತ್ಮಹತ್ಯೆ ಮಾಡಿಕೊಂಡವರು.
ಪತಿಯ ಸ್ನೇಹಿತ ಮೋಹನ್ ಎಂಬಾತನಿಗೆ ಸ್ತ್ರೀಶಕ್ತಿ ಸಂಘದಿಂದ 1.25 ಲಕ್ಷ ರೂ. ಸಾಲದ ಹಣ ಹಾಗೂ ತನ್ನ ಬಳಿಯಿಂದ ಚಿನ್ನಾಭರಣವನ್ನು ಸುನೀತಾ ನೀಡಿದ್ದರು ಎನ್ನಲಾಗಿದೆ. ಮೋಹನ್ ಹಣ ವಾಪಸ್ ನೀಡದೆ ಬ್ಲಾಕ್ ಮೇಲ್ ಮಾಡುತ್ತಿದ್ದರೆ, ಹಣ ಇನ್ನೂ ಏಕೆ ವಾಪಸ್ ಪಡೆದಿಲ್ಲವೆಂದು ಪತಿ ಜಗದೀಶ್ ಶೀಲ ಶಂಕಿಸಿದ್ದ ಎಂದು ತಿಳಿದು ಬಂದಿದೆ.
ತನ್ನ ಸಾವಿಗೆ ಪತಿ ಜಗದೀಶ್ ಹಾಗೂ ಆತನ ಸ್ನೇಹಿತ ಮೋಹನ್ ಕಾರಣವೆಂದು ಸುನಿತಾ ಡೆತ್ ನೋಟ್ ಬರೆದಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.