ಕೇಂದ್ರ, ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ : ಎಚ್.ಡಿ. ಕುಮಾರಸ್ವಾಮಿ

Update: 2018-03-31 13:41 GMT

ಜಗಳೂರು,ಮಾ.31:ರೈತರೇ, ಜನಸಾಮಾನ್ಯರೇ ನೀವು ಈ ಚುನಾವಣೆಯಲ್ಲಿ ಕೈಗೊಳ್ಳುವ ನಿರ್ಧಾರ ನಿಮ್ಮ ಭವಿಷ್ಯ ನಿರ್ಧರಿಸಲಿದೆ. ಆದ್ದರಿಂದ ರೈತಸ್ನೇಹಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ಶನಿವಾರ ಪಟ್ಟಣದ ಬಿಇಓ ಕಚೇರಿ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಕುಮಾರ ಪರ್ವ' ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪಕ್ಷಕ್ಕೆ ಒಮ್ಮೆ ಅವಕಾಶ ನೀಡಿದರೆ ರೈತರು ಹಾಗೂ ಜನಸಾಮಾನ್ಯರ ಬಾಳು ಅಸನು ಮಾಡುವುದರ ಮೂಲಕ, ಪ್ರತಿಯೊಂದು ಸೌಲಭ್ಯಗಳು ನಿಮ್ಮ ಮನೆ ಬಾಗಿಲಿಗೆ ತಲುಪುವಂತೆ ಮಾಡುತ್ತೇನೆ. ಕಳೆದ 12 ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ಅವಕಾಶ ನೀಡಿದ್ದೀರಿ. ಅವರು ಹೇಗೆ ಆಡಳಿತ ನಡೆಸಿದ್ದಾರೆ ಎಂಬುದು ನಿಮಗೆ ತಿಳಿದಿದೆ. ರಾಜ್ಯಾದ್ಯಂತ ಪ್ರಧಾನಿ ಮೋದಿ, ಅಮಿತ್ ಶಾ, ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಮಾಡುವ ಮೂಲಕ ಒಬ್ಬರನ್ನೊಬ್ಬರು ಬೈಯ್ಯುವಂತ ಕೆಲಸದಲ್ಲೇ ಮಗ್ನರಾಗಿದ್ದಾರೆ ವಿನಹ ರೈತ ಪರ ಒಬ್ಬರಿಗೂ ಕಾಳಜಿ ಇಲ್ಲ ಎಂದರು.

ನಾನೂ 20 ತಿಂಗಳ ಕಾಲ ಮುಖ್ಯಮಂತ್ರಿಯಾದಾಗ ಅಲ್ಪ ಅವಧಿಯಲ್ಲಿ ಹಲವಾರು ಯೋಜನೆ ಜಾರಿಗೆ ತಂದಿದ್ದೇನೆ. ಕಳೆದ 4 ವರ್ಷಗಳಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಇದನ್ನು ಮನಗಂಡ ನಾವು ರೈತರ ಸಾಲ ಮನ್ನಾ ಮಾಡುವಂತೆ ಹೋರಾಟ ಮಾಡಿದ್ದರಿಂದ ಎಚ್ಚೆತ್ತುಕೊಂಡ ಸರಕಾರ 50 ಸಾವಿರ ರೂ. ವರೆಗೆ ಸಾಲ ಮನ್ನಾ ಮಾಡಿ 9 ತಿಂಗಳು ಕಳೆದರು ಸಹ ಸಂಪೂರ್ಣವಾಗಿ ಹಣ ಬಿಡುಗಡೆಯಾಗಿಲ್ಲ. ಇನ್ನು 6 ಕೋಟಿ 50 ಲಕ್ಷ ರು. ಬಿಡುಗಡೆಯಾಗಬೇಕು. ನಾನೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಎರಡೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡಿ 20 ಗಂಟೆಯಲ್ಲಿ ಹಣ ಬಿಡುಗಡೆ ಮಾಡಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.

30 ಜಿಲ್ಲೆಗಳಲ್ಲಿ ವಾರ್ಷಿಕ ಮಳೆಗನುಗುಣವಾಗಿ ಬಿತ್ತನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಕ್ಕೆ ಬಂದು 6 ತಿಂಗಳ ಅವಧಿಯಲ್ಲಿ ರೈತರಿಗೆ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಗುವುದು, 70  ವರ್ಷ ದಾಟಿದ ಪ್ರತಿಯೊಬ್ಬರಿಗೂ ತಿಂಗಳಿಗೆ 5 ಸಾವಿರ ಮಾಶಾಸನ, ವಿಧವೆ ಹಾಗೂ ಅಂಗವಿಕಲರಿಗೆ 2 ಸಾವಿರ ರು. ಮಾಶಾಸನ ನೀಡಲಾಗುವುದು. ಅಪೌಷ್ಠಿಕತೆಯಿಂದ ಬಳಲುವ ಗರ್ಭೀಣಿ ಮಹಿಳೆಯರಿಗೆ ಗರ್ಭಧರಿಸಿ 6 ತಿಂಗಳ ನಂತರ ಹಾಗೂ ಮಗು ಹುಟ್ಟಿ 3 ತಿಂಗಳ ಕಾಲ ಮಾಸಿಕವಾಗಿ 5 ಸಾವಿರ ನೀಡಲಾಗುವುದು, ನೀರಾವರಿ ಸೌಲಭ್ಯ ನೀಡಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿ, ತಾಲೂಕಿನಲ್ಲಿ ರೈತರು ಬೆಳೆದ ಮೆಕ್ಕೆ ಜೋಳ ಬೆಳೆಗೆ ಸೈನಿಕ ಹುಳು ಹಾವಳಿಯಾದ ಸಂದರ್ಭ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ರವರು ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದ್ದರು. ಪ್ಲೋರೈಡ್ ಮುಕ್ತ ನೀರನ್ನು ಒದಗಿಸಲು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು 65 ಕೊಟಿ ರೂ. ವೆಚ್ಚದ ಯೋಜನೆಗೆ ಮುಂಜೂರಾತಿ ನೀಡಿದ್ದರು. ಆದರೆ, 12 ವರ್ಷ ಕಳೆದರೂ ನಮ್ಮನ್ನಾಳುವ ಜನಪ್ರತಿ ನಿಧಿಗಳು ಇಚ್ಛಾಶಕ್ತಿಯ ಕೊರತೆಯಿಂದ ಈ ಯೋಜನೆ ಜಾರಿಗೆ ಬಂದಿಲ್ಲ ಎಂದರು.

ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ, ಮಾಹಿಳಾ ಘಟಕದ ಅಧ್ಯಕ್ಷೆ ಸುನಂದಮ್ಮ, ಮುಖಂಡ ದೇವೇಂದ್ರಪ್ಪ, ಉಸ್ಮಾನ್ ಅಲಿ ,ಲಕ್ಷಣ, ಹನುಮಂತಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News