ಸಾಮಾನ್ಯ ಕುರುಬರೆಲ್ಲಾ ನಮ್ಮೊಂದಿಗಿದ್ದಾರೆ: ಎಚ್.ವಿಶ್ವನಾಥ್

Update: 2018-04-09 17:17 GMT

ನಾಗಮಂಗಲ, ಎ.9: ಸಿದ್ದರಾಮಯ್ಯರೊಂದಿಗೆ ಹೈಟೆಕ್ ಕುರುಬರು ಮಾತ್ರ ಇದ್ದರೆ, ಸಾಮಾನ್ಯ ಕುರುಬರೆಲ್ಲಾ ನಮ್ಮೊಂದಿಗಿದ್ದಾರೆ  ಎಂದು ಜೆಡಿಎಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ವಿಶ್ವನಾಥ್ ಟೀಕಿಸಿದ್ದಾರೆ.

ಸೋಮವಾರ ತಾಲೂಕಿನ ತುಪ್ಪದಮಡು ಗ್ರಾಮದಲ್ಲಿರುವ ಚಿಕ್ಕಯ್ಯ ದೇವರ ದೇವಸ್ಥಾನಕ್ಕೆ ಪೂಜೆಗಾಗಿ ಆಗಮಿಸಿದ್ದ ವೇಳೆ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಕಬ್ಬಿಣದ ಕಡಲೆಯಾಗಿದೆ. ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ಬರಲಿದೆ ಎಂದರು.

ನನ್ನ ಹಿರಿತನವನ್ನೂ ಮರೆತು ಸಿದ್ದರಾಮಯ್ಯರನ್ನು ಕಾಂಗ್ರೆಸ್‍ಗೆ ಕರೆತಂದದ್ದು ನಾವು. ರಾಜಕೀಯವಾಗಿ ಬೆಳೆಯಲು ದೇವೇಗೌಡರು ಕಾರಣ ಎಂಬುದನ್ನು ಮರೆತಿದ್ದಾರೆ. ಸಮುದಾಯ ಸಂಘಟನೆ ಮಾಡಿದ್ದು ನಾನು ಎಂದು ಅವರು ಹೇಳಿಕೊಂಡರು.

ಸಮಾಜವಾದಿ ಸಿದ್ದಾಂತ ಒಪ್ಪಿದ್ದ ಸಿದ್ದರಾಮಯ್ಯ ಕಾಗಿನೆಲೆ ಮಠವೇ ಬೇಡವೆಂದಿದ್ದರು. ಈಗ ಕೆಂಪಯ್ಯ, ಬಸವರಾಜುರಂತಹ ಫೈವ್‍ಸ್ಟಾರ್ ಹೈಟೆಕ್ ಕುರುಬರು ಮಾತ್ರ ಅವರ ಜೊತೆಗಿದ್ದಾರೆ. ಸಮುದಾಯದ ಸಾಮಾನ್ಯ ಕುರುಬರು ನಮ್ಮೊಂದಿಗಿದ್ದಾರೆ ಎಂದು ಅವರು ಟೀಕಿಸಿದರು.

ಪ್ರಾದೇಶಿಕ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯವೆಂಬುದನ್ನು ಜನರ ಅರಿತಿದ್ದು, ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲಿದ್ದಾರೆ. ಮಂಡ್ಯ ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಡಿತರ ವಿತರಕರ ಸಂಘದ ರಾಜ್ಯಾದ್ಯಕ್ಷ ಕೆ.ಕೃಷ್ಣಪ್ಪ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಜವರೇಗೌಡ, ಜಿಪಂ ಸದಸ್ಯ ಮುತ್ತಣ್ಣ, ಮಾಜಿ ಸದಸ್ಯ ಡಿ.ಟಿ.ಶ್ರೀನಿವಾಸ್, ಪಟ್ಟಣ ಪಂಚಾಯತ್ ಸದಸ್ಯ ನೂರ್ ಮುಹಮ್ಮದ್, ನೆಲ್ಲಿಗೆರೆ ಬಾಲು, ಇತರ ಮುಖಂಡರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News