ನದಿಗಳ ರಕ್ಷಣೆ ಮತ್ತು ನಿರ್ವಹಣೆಗೆ ವಿಶೇಷ ಕಾನೂನು ಅಗತ್ಯ: ಚಕ್ರವರ್ತಿ ಸೂಲಿಬೆಲೆ

Update: 2018-04-10 17:52 GMT

ಮಡಿಕೇರಿ,ಎ.10 : ಕಾವೇರಿ ನದಿ ಸೇರಿದಂತೆ ದೇಶದ ಎಲ್ಲಾ ನದಿಗಳ ರಕ್ಷಣೆ ಮತ್ತು ನಿರ್ವಹಣೆಗೆ ವಿಶೇಷ ಕಾನೂನನ್ನು ರೂಪಿಸುವ ಅಗತ್ಯವಿದೆ ಎಂದು ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ಪ್ರೆಸ್‍ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲಿನಗೊಂಡಿದ್ದ ಇಂಗ್ಲೆಂಡಿನ ಥೇಮ್ಸ್ ನದಿ, ಗುಜರಾತಿನ ಸಬರಮತಿ ನದಿಗಳು ಪ್ರಸ್ತುತ ಅತ್ಯಂತ ಸ್ವಚ್ಛವಾದ ನದಿಗಳಾಗಿ ಪರಿವರ್ತನೆಯಾಗಿದ್ದು, ಇಂತಹ ಬದಲಾವಣೆಗಳು ಇತರ ನದಿಗಳಲ್ಲೂ ಕಾಣಬೇಕಾಗಿದೆ ಎಂದರು. 

ದೇವರೆಂದು ಭಕ್ತಿ ಭಾವದಿಂದ ನದಿಗಳನ್ನು ಪೂಜಿಸುವ ನಾವೇ ನದಿಯ ನೀರನ್ನು ಮಲೀನಗೊಳಿಸುತ್ತಿದ್ದು, ಪ್ರತಿಯೊಬ್ಬರಲ್ಲಿನ ‘ಪ್ರಜ್ಞಾವಂತಿಕೆ’ಯಿಂದ ಮಾತ್ರ ಜೀವನದಿ ಕಾವೇರಿಯ ಸ್ವಚ್ಛತೆ ಮತ್ತು ಪಾವಿತ್ರ್ಯತೆಯನ್ನು ಸಂರಕ್ಷಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ದಶಕಗಳ ಅಂತರದಲ್ಲಿ ಜೀವನದಿ ಕಾವೇರಿಯ ಹರಿವಿನಲ್ಲಿ ಆತಂಕಕಾರಿ ಬದಲಾವಣೆಗಳಾಗಿದೆ. ಕಾವೇರಿ ನಾಶವಾದರೆ ಕೇವಲ ನದಿ ಮಾತ್ರವಲ್ಲ ಒಂದು ಇಡೀ ಸಂಸ್ಕರತಿಯೇ ನಾಶವಾದಂತೆ ಎಂದು ಚಕ್ರವರ್ತಿ ಸೂಲಿಬೆಲೆ ಎಚ್ಚರಿಕೆಯ ನುಡಿಗಳನ್ನಾಡಿದರು.

ಜೀವನದಿ ಕಾವೇರಿ ಮಲಿನ ಗೊಳ್ಳುತ್ತಿರುವ ಬಗ್ಗೆ ರಾಷ್ಟ್ರೀಯ ಹಸಿರು ಪೀಠಕ್ಕೆ ಪತ್ರ ಬರೆದು, ಅವರ ಮೂಲಕ ನದಿಯ ಸಂರಕ್ಷಣೆಯ ಬಗ್ಗೆ ಸರ್ಕಾರಗಳಿಗೆ, ನದಿ ಹರಿಯುವ ಪ್ರದೇಶದ ಜಿಲ್ಲಾ ಆಡಳಿತ, ಗ್ರಾಮ ಪಂಚಾಯತ್ ಗಳಿಗೆ ತಾಕೀತು ಮಾಡಲು ನಿರ್ದೇಶನ ನೀಡುವಂತೆ ಕೋರಲಾಗುತ್ತದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಬೆಂಗಳೂರಿನಲ್ಲಿ ಕುಳಿತು ಶುದ್ಧ ಕಾವೇರಿಯ ನೀರನ್ನು ಕುಡಿದು ಆರೋಗ್ಯವಂತರಾಗಿ ಇರಬೇಕಾದಲ್ಲಿ ನದಿ ಹರಿಯುವ ಪ್ರದೇಶಗಳ ಸಂರಕ್ಷಣೆ, ನದಿಯ ನಿರ್ವಹಣೆ ಅತ್ಯವಶ್ಯವಾಗಿ ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾವೇರಿಯ ಉಳಿವಿಗೆಂದೇ ವಿಶೇಷ ಪ್ಯಾಕೇಜನ್ನು ಸರ್ಕಾರ ಒದಗಿಸುವುದು ಅತ್ಯವಶ್ಯ. ಕಾವೇರಿಯ ಉಳಿವಿಗಾಗಿ ಇಲ್ಲಿನ ಪರಿಸರವನ್ನು ಜತನದಿಂದ ಕಾಯ್ದುಕೊಳ್ಳುವ ಸ್ಥಳೀಯರಿಗೆ, ಹೊರ ಜಿಲ್ಲೆಗಳತ್ತ ತಮ್ಮ ಅವಶ್ಯಕತೆಗಳಿಗಾಗಿ ನೋಡಲೇಬೇಕಾದ ಅನಿವಾರ್ಯತೆಯನ್ನು ಇಲ್ಲದಾಗಿಸಿ, ಇಲ್ಲಿಯೇ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುವುದು ಸೂಕ್ತವೆಂದರು.

ಕಾವೇರಿಯ ಕ್ಷೇತ್ರ ಭಾಗಮಂಡಲ ಅತ್ಯಂತ ಸುಂದರವಾಗಿದ್ದರು, ಅಲ್ಲಿನ ನಿರ್ವಹಣೆ ಅತ್ಯಂತ ಕೆಟ್ಟದಾಗಿದೆ. ಪ್ರವಾಸೋದ್ಯಮ ಕೊಡಗಿನ ಜನತೆಗೆ ಅಗತ್ಯ ಆರ್ಥಿಕ ಶಕ್ತಿಯನ್ನು, ಉದ್ಯೋಗವನ್ನು ದೊರಕಿಸಿಕೊಡುತ್ತಿದೆ. ಭಾಗಮಂಡಲದತ್ತ ಸಾಗುವ ಹಾದಿ ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಕಾರಣಕ್ಕಾಗಿ ಸಿಂಗಲ್ ರೋಡ್ ಆಗಿದೆ ಎನ್ನುವುದು ಪ್ರತಿಬಿಂಬಿಸುವಲ್ಲಿ ನಾವು ವಿಫಲವಾಗಿದ್ದೇವೆಂದು ವಿಷಾದಿಸಿದರು.

ಪ್ರಸ್ತುತ ಅಭಿವೃದ್ಧಿಯ ವಿಚಾರಗಳ ನಡುವೆ ‘ವಿಕಾಸ’ದ ಪರಿಕಲ್ಪನೆ ಯಾರಲ್ಲೂ ಇದ್ದಂತಿಲ್ಲ. ಪರಿಸರವನ್ನು ಸಂರಕ್ಷಿಸಿಕೊಂಡು ಅಭಿವೃದ್ಧಿಯನ್ನು ಕಂಡುಕೊಳ್ಳುವುದು ವಿಕಾಸವಾಗುತ್ತದೆ. ಆದರೆ, ಪರಿಸರವನ್ನು ಕಳೆದುಕೊಂಡು ಸೌಲಭ್ಯಗಳನ್ನು ಹೊಂದುವುದೆ ಅಭಿವೃದ್ಧಿ ಎಂಬಂತಾಗಿದೆ. ಇದಕ್ಕೆ ಬೆಂಬಲವಾಗಿ ಸರ್ಕಾರಗಳು ಮುಂದುವರಿಯುತ್ತಿವೆ ಎಂದ ಅವರು, ಕೊಡಗಿನ ಹೈಟೆನ್ಶನ್ ಮಾರ್ಗ ನಿರ್ಮಾಣದಲ್ಲಿ ಸಹಸ್ರಾರು ಮರಗಳನ್ನು ಕಡಿಯಲು, ಎತ್ತಿನ ಹೊಳೆ ಯೋಜನೆ ಆಗುತ್ತದೋ ಬಿಡುತ್ತದೋ, ಅಷ್ಟರಲ್ಲೆ ಯೋಜನೆ ಹಾದು ಹೋಗುವ ಪ್ರದೇಶದ ಅರಣ್ಯದ  ಮರಗಳನ್ನು ತೆಗೆಯುವ ಕಾರ್ಯದ ಹಿಂದೆ ಆತಂಕ ಅಡಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ತ್ಯಾಗ ಮನೋಭಾವನೆ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಯುವ ಸಮೂಹದಲ್ಲಿ ಬಿತ್ತುವ ಮೂಲಕ ಕಾವೇರಿಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟ ತಮಿಳರ ಭಾವನೆಗಳನ್ನು ತಮ್ಮತ್ತ ವಾಲಿಸಿಕೊಂಡು ಚುನಾವಣೆ ಗೆಲ್ಲುವ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದರು. ಚಿತ್ರನಟ ರಜನೀಕಾಂತ್ ಅವರು ಪ್ರಸ್ತುತ ರಾಜಕಾರಣಿಯಾಗಿರುವುದರಿಂದ ಅವರು ಅಂತಹ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸಂವಾದದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಉಪಸ್ಥಿತರಿದ್ದರು.

ಎ.11 ರಂದು ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ಕಲುಷಿತಗೊಳ್ಳುತ್ತಿರುವ ಜೀವನದಿ ಕಾವೇರಿಯ ಸ್ವಚ್ಛತಾ ಕಾರ್ಯಕ್ಕೆ ಏಪ್ರಿಲ್ 11 ರಂದು ಪವಿತ್ರ ಕ್ಷೇತ್ರ ಭಾಗಮಂಡಲ ಕ್ಷೇತ್ರದಲ್ಲಿ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಕಾವೇರಿ ನದಿ ಸ್ವಚ್ಛತಾ ಕಾರ್ಯವನ್ನು ಆರಂಭಿಕ ಹಂತದಲ್ಲಿ ನೆಲ್ಯಹುದಿಕೇರಿ-ಸಿದ್ದಾಪುರ ಸೇತುವೆ ಬಳಿ, ಕುಶಾಲನಗರ, ಹಾಸನದ ರಾಮನಾಥಪುರ ಮತ್ತು ಶ್ರೀರಂಗಪಟ್ಟಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ರಾಜ್ಯದ ವಿವಿಧೆಡೆಗಳ 80 ರಿಂದ 100 ಉತ್ಸಾಹಿ ಯುವಕರು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದರು.

ಪೂರ್ವಯೋಜಿತ ಕಾರ್ಯಕ್ರಮದಂತೆ ಏ.12 ರಂದು ಸಿದ್ದಾಪುರದಲ್ಲಿ, ಏ. 13ರಂದು ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಈ ದಿನಗಳಲ್ಲಿ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 4 ರಿಂದ 7.30 ಗಂಟೆಯವರೆಗೆ ನದಿಯ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆಂದು ಮಾಹಿತಿ ನೀಡಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News