ಸಿಎಂಗೆ ಬನಶಂಕರಿ ದೇವಿಯ ಆಶೀರ್ವಾದ ಸಿಗಲ್ಲ: ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ

Update: 2018-04-21 13:06 GMT

ಬಾಗಲಕೋಟೆ, ಎ.21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ದೇವಿ ಆಶೀರ್ವಾದ ಸಿಗಲ್ಲ ಅನ್ನೋದು ಗೊತ್ತಾಗಿ ಬನಶಂಕರಿ ದೇವಿ ಆಶೀರ್ವಾದಕ್ಕಾಗಿ ಬಾದಾಮಿಗೆ ಬರುತ್ತಿದ್ದಾರೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲಿ ಗೆಲುವು ದುಸ್ಸಾಹಸ ಎಂದು ಗೊತ್ತಾಗಿದ್ದರಿಂದ ಬಾದಾಮಿ ಕಡೆಗೆ ಚಿತ್ತ ಹರಿಸಿದ್ದಾರೆ. ಆದರೆ, ಇಲ್ಲಿಯೂ ಬಾದಾಮಿಯ ಬನಶಂಕರಿ ದೇವಿಯ ಆಶೀರ್ವಾದ ಅವರಿಗೆ ಸಿಗಲ್ಲ. ಹೀಗಾಗಿ ಎರಡು ಕಡೆ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎಂದು ವ್ಯಂಗ್ಯವಾಡಿದರು.

ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಕೆಂಪಯ್ಯ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಕೆಂಪಯ್ಯ ಅವರು ಬಹಳಷ್ಟು ಜನರನ್ನು ಈಗಾಗಲೇ ಮುಗಿಸಿದ್ದಾರೆ. ಹಾಗಾಗಿ ಈಗ ಸಿಎಂ ಅವರನ್ನು ಮುಗಿಸಲು ಜೆಡಿಎಸ್ ಅಭ್ಯರ್ಥಿ ಜೊತೆ ಸಂಪರ್ಕದಲ್ಲಿ ಇರಬಹುದು ಎಂದರು. ಜೆಡಿಎಸ್ ಬಾದಾಮಿಯಲ್ಲಿ ಯಾರ ಜೊತೆ ಒಳ ಒಪ್ಪಂದ ಮಾಡಿಕೊಳ್ಳದೇ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News