'ಕಮಲ' ಬಿಟ್ಟು 'ಕೈ' ಹಿಡಿಯಲು ನಿರ್ಧರಿಸಿದ ಬೇಳೂರು

Update: 2018-04-21 13:29 GMT

ಶಿವಮೊಗ್ಗ, ಎ. 21: ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಹಾರಿಸಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು, ಬಹುತೇಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಇದರಿಂದ ಕಳೆದ ಕೆಲ ತಿಂಗಳುಗಳಿಂದ ಸಾಗರ ಬಿಜೆಪಿಯಲ್ಲಿ ನಡೆಯುತ್ತಿದ್ದ ಟಿಕೆಟ್ ಹೈಡ್ರಾಮಾ ಬೇಳೂರು ಪಕ್ಷ ತೊರೆಯುವುದರೊಂದಿಗೆ ಅಂತ್ಯಗೊಂಡಂತಾಗಿದೆ.

ಮತ್ತೊಂದೆಡೆ ಸಾಗರದಲ್ಲಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿ ಕಣಕ್ಕಿಳಿಸುವುದು ಅನುಮಾನವಾಗಿದೆ. ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪಗೆ ಬೆಂಬಲಿಸುವ ಸಾಧ್ಯತೆ ಕಂಡುಬರುತ್ತಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. 

ತಿರುವು: ಈಗಾಗಲೇ ಬೇಳೂರುರವರು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಆ ಪಕ್ಷದ ಹಿರಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಬೇಳೂರು ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದು, ರವಿವಾರ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. 

ತಮಗೆ ಹಾಗೂ ಬೆಂಬಲಿಗರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂಬ ಏಕೈಕ ಷರತ್ತನ್ನು ಬೇಳೂರು ಕಾಂಗ್ರೆಸ್ ಮುಖಂಡರ ಮುಂದಿಟ್ಟಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ವರಿಷ್ಠರು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. 

ಕಾಗೋಡು ತಿಮ್ಮಪ್ಪ ತಂಗಿಯ ಪುತ್ರರಾದ ಬೇಳೂರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಷಯವು ಸಾಗರ ಕೈ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ. ಮಾವ - ಅಳಿಯ ಒಂದಾಗುತ್ತಿರುವುದು ಹಾಗೂ ಜೆಡಿಎಸ್ ಪಕ್ಷ ಅಭ್ಯರ್ಥಿ ಅಖಾಡಕ್ಕಿಳಿಸದೆ, ಪರೋಕ್ಷವಾಗಿ ಕಾಗೋಡು ಬೆಂಬಲಕ್ಕೆ ನಿಲ್ಲಲಿದೆ ಎಂಬ ವಿಷಯವು ಕೈ ಕಾರ್ಯಕರ್ತರ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ. 

ಮತ್ತೊಂದೆಡೆ ಬೇಳೂರನ್ನು ಶತಾಯಗತಾಯ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಬಿಜೆಪಿ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದಂತಾಗಿವೆ. ಚುನಾವಣೆ ಸಮೀಪದಲ್ಲಿ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು, ಸಾಗರ ಕ್ಷೇತ್ರದ ಬಿಜೆಪಿ ಪಾಳೇಯದಲ್ಲಿ ಸಹಜವಾಗಿಯೇ ಗೊಂದಲ ಉಂಟು ಮಾಡಿದೆ. ಬೇಳೂರು ಬೇರ್ಪಟ್ಟಿದ್ದರಿಂದ ಪಕ್ಷಕ್ಕಾಗುವ ಡ್ಯಾಮೇಜ್ ತಡೆಗೆ ಪಕ್ಷದ ಮುಖಂಡರು ಯಾವ ಕ್ರಮ ಅನುಸರಿಸುತ್ತಾರೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

ಲೆಕ್ಕಾಚಾರವೇನು?: ಹರತಾಳು ಹಾಲಪ್ಪಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಬಿಜೆಪಿ ತೊರೆಯುವ ನಿರ್ಧಾರ ಪ್ರಕಟಿಸಿದ್ದ ಬೇಳೂರು, ಎ. 23 ರಂದು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸಾಗರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿಯೂ ಘೋಷಿಸಿದ್ದರು. 'ಹಾಲಪ್ಪರನ್ನು ಸೋಲಿಸುವುದೇ ತಮ್ಮ ಮುಖ್ಯ ಗುರಿಯಾಗಿದೆ' ಎಂದು ಹೇಳಿದ್ದರು. ಆದರೆ ಚುನಾವಣಾ ಕಣಕ್ಕಿಳಿಯುವ ನಿರ್ಧಾರದಿಂದ ದಿಢೀರ್ ಹಿಂದೆ ಸರಿದ ಬೇಳೂರು, ಕಾಂಗ್ರೆಸ್ ಸೇರ್ಪಡೆಯಾಗುವ ತೀರ್ಮಾನ ಪ್ರಕಟಿಸಿರುವುದು ಸಹಜವಾಗಿಯೇ ಅವರ ಬೆಂಬಲಿಗರಲ್ಲಿ ಅಚ್ಚರಿ ಉಂಟು ಮಾಡಿದೆ. ಆದರೆ ಬೇಳೂರು ಈ ನಿರ್ಧಾರದ ಹಿಂದೆ ರಾಜಕೀಯ ಲೆಕ್ಕಾಚಾರಗಳಿರುವ ಮಾತುಗಳು ಕೇಳಿಬರುತ್ತಿವೆ. 

'ಈ ಚುನಾವಣೆಯಲ್ಲಿಯೇ ಕಾಗೋಡು ಅಖಾಡಕ್ಕಿಳಿಯಲು ಹಿಂದೇಟು ಹಾಕಿದ್ದರು. ಆದರೆ ಬೆಂಬಲಿಗರ ಒತ್ತಾಯದ ಕಾರಣದಿಂದ ಕಣಕ್ಕಿಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬೇಳೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಹೆಸರೇಳಲಿಚ್ಚಿಸದ ಬೇಳೂರು ಆಪ್ತರೋರ್ವರು ಅಭಿಪ್ರಾಯಪಡುತ್ತಾರೆ. 

ಮಧು ಬಂಗಾರಪ್ಪರ ಕಾರ್ಯತಂತ್ರ!
ಕಾಗೋಡು ತಿಮ್ಮಪ್ಪ ಹಾಗೂ ಮಧು ಬಂಗಾರಪ್ಪ ಬೇರೆ ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಈ ಕಾರಣದಿಂದಲೇ ಸಾಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸದೆ, ಕಾಗೋಡು ತಿಮ್ಮಪ್ಪ ಗೆಲುವು ಸುಲಭವಾಗಿಸಬೇಕೆಂಬ ಚಿಂತನೆ ಮಧು ಬಂಗಾರಪ್ಪರವರದ್ದಾಗಿದೆ ಎಂದು ಹೇಳಲಾಗುತ್ತಿದೆ. ಮಧುರವರ ಈ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠರು ಕೂಡ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದೆ. ಈ ಕಾರಣದಿಂದ ಸಾಗರ ಕ್ಷೇತ್ರದಿಂದ ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆಯಾ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News