ಕಾಂಗ್ರೆಸ್ ಹೈಕಮಾಂಡ್ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ: ಮಾಜಿ ಶಾಸಕ ಎಸ್.ಬಾಲರಾಜು
ಕೊಳ್ಳೇಗಾಲ,ಎ.21: ಕಳೆದ 4 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ನಾನು ಪ್ರಾಮಾಣಿಕವಾಗಿ ದುಡಿದೆ. ಆದರೆ ಹೈಕಮಾಂಡ್ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಮಾಡಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜು ಆರೋಪಿಸಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಾಲರಾಜು ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಹೋರಾಟದಿಂದ ರಾಜಕಾರಣಕ್ಕೆ ಬಂದವನು. ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯನ್ನು ಸಹ ಮಾಡುವುದಿಲ್ಲ. ನಾನು ನನ್ನ ಅಭಿಮಾನಿಗಳು ಯಾವ ಪಕ್ಷಕ್ಕೆ ಸಹಕಾರ ಮಾಡು ಎನ್ನುತ್ತಾರೆ ಅದಕ್ಕೆ ನಾನು ಬದ್ದನಾಗಿರುತ್ತೇನೆ. ಯಾವುದೇ ತೀರ್ಮಾನ ತೆಗೆದು ಕೊಳ್ಳಬೇಕಾದರೂ ನನಗೆ ಇನ್ನೂ 2 ದಿನ ಕಾಲವಕಾಶ ಬೇಕಾಗಿದೆ ಎಂದರು.
ಆದರೆ ನನಗೆ ಟಿಕೆಟ್ ಸಿಗದ ಕಾರಣ ಮನಸ್ಸಿಗೆ ತುಂಬಾ ನೊವುಂಟಾಗಿದೆ. ಪಕ್ಷಕ್ಕಾಗಿ ನಾನು ದುಡಿದು ಅನೇಕ ಜನಪರ ಕೆಲಸಗಳನ್ನು ಸಹ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸಹ ಕಾರಣ ಆಗಿದ್ದೇನೆ. ಆದರೂ ನನಗೆ ಟಿಕೆಟ್ ಕೈತಪ್ಪಿದೆ ಎಂದರು. ನಾನು ಯಾವ ಪಕ್ಷಕ್ಕೂ ಸಹ ಹೋಗುವುದಿಲ್ಲ ನನ್ನ ಅಭಿಮಾನಿಗಳ ತೀರ್ಮಾನಕ್ಕೆ ಬದ್ದನಾಗಿರುತ್ತೆನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ದಿನೇಶ್ ಗುಪ್ತ, ವೈಕೆ.ಮೊಳೆ ಮಾದೇವಶೆಟ್ಟಿ, ಅನ್ವರ್, ಶಿವಣ್ಣ, ನಿಸಾರ್ ರಾಜಶೇಖರ್ ಮಹೇಶ್, ಸೋಮು, ಬಾಬು ಕೆ.ಕೆ.ಮೂರ್ತಿ, ಸಾಮುವೆಲ್, ಪ್ರಕಾಶ್ಮೂರ್ತಿ, ಬಸವರಾಜು, ಮತ್ತಿತರರು ಇದ್ದರು.