ತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ

Update: 2018-04-23 18:27 GMT

ನಂಜನಗೂಡು ಪಟ್ಟಣದ ಊಟಿ ರಸ್ತೆಯಲ್ಲಿರುವ ಶ್ರೀಪ್ರಸನ್ನ ಚಿಂತಾಮಣಿ ಗಣಪತಿ ದೇವಸ್ಥಾನದ ಬಳಿ ಇರುವ ವಿದ್ಯಾವರ್ಧಕ ಮೈದಾನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಿಜೆಪಿ ಸಮಾವೇಶ ಕಾರ್ಯಕರ್ತರ ಆಕ್ರೋಶಕ್ಕೆ ಸಾಕ್ಷಿಯಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಅವರ ಪುತ್ರ ವಿಜಯೇಂದ್ರ ಅವರಿಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಇಲ್ಲ ಎಂದು ತಿಳಿಯುತ್ತಿದ್ದಂತೆಯೇ ವಿಜಯೇಂದ್ರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಯಡಿಯೂರಪ್ಪಸೇರಿದಂತೆ ವೇದಿಕೆಯ ಮೇಲಿದ್ದ ನಾಯಕರ ವಿರುದ್ಧ ಏಕವಚನದಲ್ಲೇ ಧಿಕ್ಕಾರ ಕೂಗಿದರು. ಕಾರ್ಯಕರ್ತರನ್ನು ನಿಯಂತ್ರಿಸಲಾಗದೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಮೈಸೂರಿನಲ್ಲಿ ಆಕ್ರೋಶಭರಿತ ಕಾರ್ಯಕರ್ತರು ಕೇಂದ್ರ ಸಚಿವರಾದ ಅನಂತ ಕುಮಾರ್, ಅನಂತಕುಮಾರ್ ಹೆಗಡೆ, ಸಂಸದ ಪ್ರತಾಪ ಸಿಂಹ, ಆರ್.ಅಶೋಕ್ ಅವರ ಭಾವಚಿತ್ರಗಳಿಗೆ ಉಗಿದು ಚಪ್ಪಲಿಯಲ್ಲಿ ಹೊಡೆದು ಕಾಲಿನಲ್ಲಿ ಹೊಸಕಿ ಹಾಕಿದರು. ಬಿಜೆಪಿ ಹಾಗೂ ಕೇಸರಿ ಧ್ವಜಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor