ಕನ್ನಡಿಗರ ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿ ಡಾ.ರಾಜ್: ಚಿಕ್ಕಮಗಳೂರು ಡಿಸಿ ಶ್ರೀರಂಗಯ್ಯ

Update: 2018-04-24 16:32 GMT

ಚಿಕ್ಕಮಗಳೂರು, ಎ.24: ಡಾ. ರಾಜ್‍ಕುಮಾರ್ ರವರು ಸಮಾಜದ ಎಲ್ಲಾ ವರ್ಗದ ಜನರ ಮನಸ್ಸಿನಲ್ಲಿಯೂ ನೆಲೆಸಿರುವ  ಮೇರು ನಟ ಎಂದು ಜಿಲ್ಲಾಧಿಕಾರಿ ಶ್ರೀ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು. 

ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಮಗಳೂರು ಅವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವರನಟ ಡಾ. ರಾಜ್‍ಕುಮಾರ್ ರವರ 90ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ರಾಜ್‍ಕುಮಾರ್ ರವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಇಡೀ ಸಮಾಜಕ್ಕೆ ಬೇಕಾಗಿದ್ದವರು ರಾಜ್‍ಕುಮಾರ್ ಎಂದ ಅವರು ಇಡೀ ಕನ್ನಡ ನಾಡೇ ಅವರನ್ನು ಅತ್ಯುನ್ನತ ಸ್ಥಾನದಲ್ಲಿಟ್ಟು ಆರಾಧಿಸುತ್ತಿತ್ತು ಎಂದರು.

ಗೋಕಾಕ್ ಚಳುವಳಿಯಲ್ಲಿ ರಾಜ್ ಅವರ ಬೆಂಬಲ ಕನ್ನಡ ಪ್ರೇಮಿಗಳಲ್ಲಿ ಸಂಚಲನವನ್ನು ಮೂಡಿಸಿತು ಎಂದ ಅವರು ಡಾ. ರಾಜ್‍ಕುಮಾರ್ ರವರು ಎಲ್ಲಾ ಪಾತ್ರಗಳಲ್ಲಿಯೂ ಅತ್ಯುತ್ತಮವಾಗಿ ನಟಿಸುತ್ತಿದ್ದರು. ಅವರ ಅನೇಕ ಚಿತ್ರಗಳನ್ನು ನೋಡಿದ್ದಾಗಿಯೂ ತಿಳಿಸಿ ಜೊತೆಗೆ ಅವರ ಚಿತ್ರದ ಹಾಡುಗಳನ್ನು ಚಿಕ್ಕ ವಯಸ್ಸಿನಲ್ಲಿ ಹಾಡಿರುವ ಬಗ್ಗೆ ತಮ್ಮ ಮಾತುಗಳಲ್ಲಿ ಹಂಚಿಕೊಂಡರು.

ರಾಜ್‍ಕುಮರ್ ರವರನ್ನು ಹತ್ತಿರದಿಂದ ನೋಡಬೇಕೆಂಬ ಬಯಕೆ ಹೊಂದಿದ್ದ ನಾನು ಬೆಂಗಳೂರಿನಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುವಾಗ ಕಚೇರಿಯ ಮುಂದೆ ಚಲನಚಿತ್ರ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಾಜ್‍ರವರನ್ನು ಭೇಟಿ ಮಾಡಿ ಮಾತನಾಡಿಸಿದ ಬಗ್ಗೆ ಹಾಗೂ ಈ ಸಂದರ್ಭವನ್ನು ಅನೇಕ ಸ್ನೇಹಿತರೊಂದಿಗೆ ಹಂಚಿಕೊಂಡೆ ಎಂದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್‍ರವರು ಅಭಿನಯಿಸಿದ ಒಂದೊಂದು ಪಾತ್ರವು ಚಿರಸ್ಮರಣೀಯ, ಒಂದೊಂದು ಚಿತ್ರಗಳು ಸಮಾಜಕ್ಕೆ ಒಂದೊಂದು ಸಂದೇಶವನ್ನು ನೀಡಿವೆ ಎಂದರು.

ರಾಜ್‍ಕುಮಾರ್ ರವರದು ಪಾತ್ರಕ್ಕೆ ತಕ್ಕಂತೆ ಅಭಿನಯ ವೇಷಕ್ಕೆ ತಕ್ಕಂತೆ ಅಂಗಿಕ ರಾಜ್‍ಕುಮಾರ್ ಕಷ್ಟಗಳಲ್ಲಿಯೇ ಬೆಳೆದು ಬಂದರು, ಎಲ್ಲಾ ಪಾತ್ರಗಳಲ್ಲಿಯೂ ನವಿರಾಗಿ ಪ್ರತಿಬಿಂಬಿಸುತ್ತಿದ್ದರು. ನಾಡು ನುಡಿಯ ಹಿತವನ್ನು ಕಾಪಾಡುವ ಕಾಯಕವನ್ನು ಅವರು  ಮಾಡಿರುವರು ಎಂದು ಈ ಸಂಧರ್ಭದಲ್ಲಿ ತಿಳಿಸಿದರು. 

ಲೇಖಕಿ ವಾಣಿ ಚಂದ್ರಯ್ಯನಾಯ್ಡು ಉಪನ್ಯಾಸ ನೀಡಿ ರಾಜ್‍ಕುಮಾರ್ ವಿಶ್ವದಲ್ಲಿಯೇ ಅಪರೂಪರೆನಿಸುವ ಮಹಾನ್ ವ್ಯಕ್ತಿಯಾಗಿದ್ದರು.       ರಾಜ್ ಅಭಿನಯಕ್ಕಾಗಿ ಮಾತ್ರವಲ್ಲದೆ ಗಾಯನಕ್ಕೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ  ಪ್ರಶಸ್ತಿಯನ್ನು ಗಳಿಸಿದ್ದಾರೆ ಎಂದ ಅವರು ಪದ್ಮಭೂಷಣ ದಾದಸಾಹೇಬ ಪಾಲ್ಕೆ ಹಾಗೂ ಕರ್ನಾಟಕ ರತ್ನ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ ಎಂದರು. ರಾಜ್‍ರವರು ಅಭಿಜಾತ ಕಲಾವಿದ, ಕಲೆಯ ಅರಾಧಕ ಹಾಗೂ ಕಲೆಯನ್ನು ಬದುಕನ್ನಾಗಿಸಿಕೊಂಡಿದ್ದರು ಎಂದು ಬಣ್ಣಿಸಿದರು. 

ಇದೇ ಸಂದರ್ಭದಲ್ಲಿ ಡಾ.ರಾಜ್‍ಕುಮಾರ್‍ರವರ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಯಿತು.

ರಾಜ್ ಅಭಿಮಾನಿ ಎ.ಎನ್.ಮೂರ್ತಿ, ರಾಜ್‍ಕುಮಾರ್ ರವರ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.
ವಾರ್ತಾಧಿಕಾರಿ ಜೆ.ಮಂಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಮಾ ಪ್ರಸಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News