ಗಂಗಾವತಿ: ಕಾಂಗ್ರೆಸ್ ಅಭ್ಯರ್ಥಿ ಶಾಸಕ ಇಕ್ಬಾಲ್ ಅನ್ಸಾರಿ ನಾಮಪತ್ರ ಸಲ್ಲಿಕೆ

Update: 2018-04-25 11:38 GMT

ಗಂಗಾವತಿ,ಎ.25: ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಇಕ್ಬಾಲ್ ಅನ್ಸಾರಿ ಅಪಾರ ಸಂಖ್ಯೆಯ ಕಾರ್ಯ ಕರ್ತರು ಮತ್ತು ಅಭಿಮಾನಗಳ ರೋಡ್ ಶೋ ಮಧ್ಯೆ ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. 

ಕೊಪ್ಪಳ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಿಂದ ಪ್ರಚಾರ ವಾಹನದಲ್ಲಿ ಕಾರ್ಯಕರ್ತರೊಂದಿಗೆ ಸಿಬಿಎಸ್‍ವೃತ್ತ, ಇಸ್ಲಾಂಪುರ, ಮಹಾವೀರ ಸರ್ಕಲ್, ಗಾಂಧಿ ಸರ್ಕಲ್, ಮಲ್ಲಿಕಾರ್ಜುನ ಮಠ, ದುರ್ಗಮ್ಮ ದೇವಸ್ಥಾನ ಮಾರ್ಗವಾಗಿ ಬಸ್-ನಿಲ್ದಾಣ ರಸ್ತೆ ಶ್ರೀ ಕೃಷ್ಣದೇವರಾಯ ವೃತ್ತದ ಮುಖಾಂತರ ಬಸವೇಶ್ವರ ಸರ್ಕಲ್‍ನಿಂದ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಮಾತನಾಡಿ, ನಾಮಪತ್ರ ಸಲ್ಲಿಕೆ ವೇಳೆ ನಿರೀಕ್ಷೆಗೂ ಮೀರಿ ಜನ ಬೆಂಬಲ ದೊರೆತಿದ್ದು, ಗೆಲುವು ಖಚಿತ ಎಂದರು. ಕ್ಷೇತ್ರದಲ್ಲಿ ಈ ಭಾರಿ ತಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಅತ್ಯಧಿಕ ಸಂಖ್ಯೆಯಿಂದ ನನ್ನನ್ನು ಆಯ್ಕೆ ಮಾಡಲು ಜನ ಬಯಸಿದ್ದಾರೆ . ಮುಖ್ಯಮಂತ್ರಿಗಳು ಜಾರಿ ಮಾಡಿದ ಯೋಜನೆಗಳು ಜನರನ್ನು ತಲುಪಿವೆ. ತಮ್ಮ ಗೆಲುವಿಗೆ ಸರಕಾರದ ಯೋಜನೆ ಮತ್ತು ಗಂಗಾವತಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಪ್ರಮುಖ ಕಾರಣವಾಗಿವೆ. ತಾನು ಎಂದಿಗೂ ಜಾತಿ ಧರ್ಮದ ನಡುವೆ ಬೇಧ ಮಾಡಿಲ್ಲ. ಸರ್ವ ಜನರಿಗೆ ಅನುಕೂಲ ವಾಗುವಂತ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗಿದೆ. ಕ್ಷೇತ್ರದ ಜನರು ಬಿಜೆಪಿ ಸಂಘ ಪರಿವಾರ ಸೇರಿ ಪಟ್ಟಭದ್ರ ಹಿತಾಸಕ್ತಿಗಳ ಮಾತು ಕೇಳದೇ ಮತ್ತೊಮ್ಮೆ ತನಗೆ ಆಶೀರ್ವಾದ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ಕನ್ನಡ ಭಾಷೆ ನೆಲ ಜಲ ವಿಷಯದಲ್ಲಿ ಮುಖ್ಯಮಂತ್ರಿಗಳು ಉತ್ತಮ ನಿರ್ಣಯಕೈಗೊಳ್ಳುವ ಮೂಲಕ ಕನ್ನಡ ಭಾಷೆ ಮೇಲಿನ ಪ್ರೀತಿ ಮೆರೆದಿದ್ದಾರೆ. ಇಡೀ ರಾಜ್ಯದ ಜನರು ಸಿದ್ದರಾಮಯ್ಯ ನವರ ಸರಕಾರವನ್ನು ಮತ್ತೊಮ್ಮೆ ನೋಡಲಿಚ್ಚಿಸಿದ್ದಾರೆ. ರೋಡ್ ಶೋ ಗೆ ಆಗಮಿಸಿದ ಕಾರ್ಯಕರ್ತ ರು ಮತ್ತು ಅಭಿಮಾನಿಗಳನ್ನು ಗಮನಿಸಿದರೆ ಕಾಂಗ್ರೆಸ್‍ಗೆ ಉತ್ತಮ ಬೆಂಬಲವಿದೆ ಎಂದು ಗೊತ್ತಾಗುತ್ತದೆ ಎಂದರು. 

ಈ ವೇಳೆ ಕೆಪಿಸಿಸಿ ವೀಕ್ಷಕ ಜಿ.ರಮೇಶ, ಮುಖಂಡರಾದ ಲಲಿತಾರಾಣಿರಾಯಲು, ಬಸವರಾಜ ಪೆದ್ದಲ್, ಫಕೀರಪ್ಪ ಎಮ್ಮಿ, ನರಸಪ್ಪ ಅಮರಜ್ಯೋತಿ, ಗಾಳೆಪ್ಪ ಘಂಟಿ, ಹನುಮಂತಪ್ಪ ಅರಸಿನಕೇರಿ, ಮುದ್ದಾಪ್ಪ ಆರ್ಹಾಳ ಮತ್ತು ಶಾಮೀದ್ ಮನಿಯಾರ್, ಇಮ್ತೀಯಾಜ್ ಅನ್ಸಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News