ಮೂಡಿಗೆರೆ: ಗೋಣಿಬೀಡು ದರ್ಗಾದಲ್ಲಿ ಎ.27 ರಂದು ಉರೂಸ್
ಮೂಡಿಗೆರೆ, ಎ.25: ಗೋಣಿಬೀಡಿನ ಅಲ್ ಹಾಜ್ ಸಯ್ಯದ್ ಶರ್ಫುದ್ದೀನ್ ಶಾಖಾದ್ರಿ ಮತ್ತು ಹಜ್ರತ್ ಸೈದಾನಿ ಬೀಬಿ ದರ್ಗಾದಲ್ಲಿ ಎ.27ರಂದು ಉರೂಸ್ ಕಾರ್ಯಕ್ರಮ ನಡೆಯಲಿದೆ ಎಂದು ವಂಶಸ್ಥ ಸೈಯದ್ ಅಲೀಂ ಶಾಖಾದ್ರಿ ತಿಳಿಸಿದ್ದಾರೆ.
ಅಂದು ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದಫ್ ಕುಣಿತದೊಂದಿಗೆ, ಮುರ್ಷದ್ (ಸೂಫಿ ಸಂತರು), ಫಕೀರರು, ಶ್ರದ್ಧಾಳುಗಳು ಗಂಧದ ಜೊತೆ ಸಂದಲ್ ಮೆರವಣಿಗೆಯಲ್ಲಿ ಸಾಗುತ್ತಾರೆ. ಮೆರವಣಿಗೆಯಲ್ಲಿ ಸಾಗುವಾಗ ಭಕ್ತಾದಿಗಳು ಹೂವು, ಸಕ್ಕರೆಯನ್ನು ಅರ್ಪಿಸುತ್ತಾರೆ. ದರ್ಗಾದಲ್ಲಿ ಫಾತಿಹಾದೊಂದಿಗೆ ವಿವಿಧ ಕಾರ್ಯಕ್ರಮಗಳು ನೆರವೇರಿದ ಬಳಿಕ ನೆರೆದವರಿಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ಉರೂಸ್ಗೆ ಸುತ್ತಮುತ್ತಲ ಗ್ರಾಮಗಳಿಂದಷ್ಟೇ ಅಲ್ಲದೆ ದೂರದ ಬೆಂಗಳೂರು, ತಮಿಳುನಾಡಿನಿಂದಲೂ ಜನರು ಶ್ರದ್ಧೆಯಿಂದ ಭೇಟಿ ನೀಡುತ್ತಾರೆ. ತಮ್ಮ ಬದುಕಿನ ಸಂಕಷ್ಟಗಳು ಪರಿಹಾರವಾಗಲಿ, ಯಾವುದೇ ಕಾಯಿಲೆಗಳು ಬಾರದೆ ಆರೋಗ್ಯ ಲಭಿಸಲಿ, ಜೀವನದಲ್ಲಿ ಅಂದುಕೊಂಡ ಸದುದ್ದೇಶದ ಕಾರ್ಯಗಳು ಯಶಸ್ವಿಯಾಗಲಿ ಎಂದು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಈ ದರ್ಗಾದಲ್ಲಿ ಪ್ರಾರ್ಥಿಸುತ್ತಾರೆ ಎಂದರು.