ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವುದನ್ನು ಮತದಾರರು ಮರೆಯಲಾರರು: ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್
ಶೃಂಗೇರಿ, ಎ.29: ಜನಸಾಮಾನ್ಯರ ಸಮಸ್ಯೆಗಳಿಗೆ ಅವಿರತವಾಗಿ ದುಡಿದು ಪಕ್ಷದ ಘನತೆಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದೇನೆ ಎಂದು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ತಿಳಿಸಿದರು.
ರವಿವಾರ ತಾಲೂಕಿನ ಗಂಡಘಟ್ಟ ಗ್ರಾಮದಲ್ಲಿ ಮತ ಯಾಚಿಸಿ ಮಾತನಾಡಿದ ಅವರು, ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಸುಸ್ಥಿತಿಯಲ್ಲಿಟ್ಟಿದ್ದೇನೆ. ಜನತಾದಳ ಹಾಗೂ ಕಾಂಗ್ರೆಸ್ನ 58 ವರ್ಷದ ಆಡಳಿತ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಕಾಲೋನಿಗಳಿಗೆ ಕಾಂಕ್ರೀಟ್ ಹಾಕಿಸುವ ಜೌದಾರ್ಯ ತೋರಲಿಲ್ಲ. ಹಾಗಾಗಿ ಬಿ.ಜೆ.ಪಿ ಆಡಳಿತದ ಅವಧಿಯಲ್ಲಿ ಕ್ಷೇತ್ರದ ಕಾಲೋನಿಗಳಿಗೆ ರಸ್ತೆ ನಿರ್ಮಾಣಗೊಂಡಿದೆ ಎಂದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಸರಕಾರವು ನೀಡುವ ಅನುದಾನವನ್ನು ಫಲಾನುಭವಿಗಳನ್ನು ಗುರುತಿಸಲು ಲಾಟರಿ ಮುಖಾಂತರ ಆಯ್ಕೆ ಮಾಡುವ ದು:ಸ್ಥಿತಿ ಕಾಂಗ್ರೆಸ್ ಸರಕಾರಕ್ಕೆ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತದ ಅವಧಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಕೃಷಿಕರಿಗೂ ವಿವಿಧ ಯೋಜನೆಯಲ್ಲಿ ಸಹಾಯಧನವನ್ನು ವಿತರಿಸಲಾಗುತ್ತಿತ್ತು. ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆಯಡಿಯಲ್ಲಿ ಗರ್ಭಿಣಿಯರು ಅಂಗನವಾಡಿಗೆ ಬಿಸಿಲಲ್ಲಿ ಊಟ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತಂದಿತ್ತು. ಮೋದಿ ಸರಕಾರವು ಮಾತೃವಂದನಾ ಕಾರ್ಯಕ್ರಮದಡಿ ಗರ್ಭಿಣಿ ಸ್ತ್ರೀಯರಿಗೆ ರು.6000 ವನ್ನು ನೀಡುತ್ತಿದೆ ಎಂದರು.
ಮುಖ್ಯಂಮತ್ರಿ ಸಿದ್ಧರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಸೋಲಿನ ಭೀತಿ ಅವರನ್ನು ಕಾಡುತ್ತಿದೆ. ಕಾಂಗ್ರೆಸ್ ಅವರಿಗೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ದೇವರು ಹಾಗೂ ದೇವಸ್ಥಾನಗಳ ನೆನಪು ಆಗುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ವರ್ಗಾವಣೆ ದಂಧೆಯ ಮೂಲಕ ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸರ್ವರೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದರು.
ತಾ.ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎಸ್.ನಟೇಶ್ ಮಾತನಾಡಿ, ಶಾಸಕರ ಮೇಲೆ ಕಾಂಗ್ರೆಸ್ ನಾಯಕರ ಸುಳ್ಳಿನ ಅಪಾದನೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಮೂರನೇ ಬಾರಿ ಗೆದ್ದ ಜನಪ್ರಿಯ ಶಾಸಕರನ್ನು ಮತ್ತೊಮ್ಮೆ ಗೆಲ್ಲಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಬೇಕು. ಮೋದಿ ಅವರ ಉಜ್ವಲಾ, ಆರೋಗ್ಯ, ಜನಜೌಷಧಿ ಕೇಂದ್ರ, ಅನಿಲಭಾಗ್ಯ, ಫಸಲ್ಭೀಮಾ, ಕೃಷಿ ಸಿಂಚಯಿ ಮುಂತಾದ ಜನಪ್ರಿಯ ಯೋಜನೆಯಿಂದ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಬಿ.ಶಿವಶಂಕರ್, ಮರ್ಕಲ್ ಗ್ರಾ.ಪಂ ಉಪಾಧ್ಯಕ್ಷ ಸುಧೀಂದ್ರ ಬೆಟ್ಟಗದ್ದೆ, ಸದಸ್ಯೆ ಶಾರದಮ್ಮ ಮೊದಲಾದವರು ಇದ್ದರು. ತಾಲೂಕಿನ ಕೆರೆಕಟ್ಟೆ, ಉಡ್ತಾಳ್, ಬುಕಡಿಬೈಲು, ನೆಮ್ಮಾರ್, ಯಡದಾಳ್, ಸಿಂದೋಡಿ, ಕೆಲ್ಲಾರ್, ಕಾಂಚೀನಗರ ಮೊದಲಾದ ಕಡೆ ಶಾಸಕರು ಮತ ಯಾಚಿಸಿದರು.