ಐಟಿ ದಾಳಿ ದೇವೇಗೌಡ, ಕುಮಾರಸ್ವಾಮಿಯ ಷಡ್ಯಂತ್ರ: ಚಲುವರಾಯಸ್ವಾಮಿ ಆರೋಪ
ನಾಗಮಂಗಲ, ಎ.29: ಚುನಾವಣೆಯಲ್ಲಿ ರಾಜಕೀಯವಾಗಿ ನಮ್ಮ ಆತ್ಮಸ್ಥೈರ್ಯ ಕುಗ್ಗಿಸಲು ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಷಡ್ಯಂತ್ರ ರೂಪಿಸಿ ತನ್ನ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ಮಾಡಿಸಿದ್ದು, ಇದಕ್ಕೆಲ್ಲಾ ಜಗ್ಗುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ತಾಲೂಕಿನ ಬಿಂಡಿಗನವಿಲೆ ಹೊನ್ನಾವರ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನೇರವಾಗಿ ಚುನಾವಣೆ ಎದುರಿಸಲಾರದೆ ಜೆಡಿಎಸ್ ಚುನಾವಣೆಯಲ್ಲಿ ಅಡ್ಡದಾರಿ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮತ್ತು ನನ್ನ ಬೆಂಬಲಿಗರ ವಿರುದ್ದ ವಿಶೇಷ ಆಸಕ್ತಿ ವಹಿಸಿರುವ ಮಾಜಿ ಪ್ರದಾನಿ ದೇವೇಗೌಡರು ಈಗಾಗಲೆ ಮೂರು ಬಾರಿ ನಾಗಮಂಗಲಕ್ಕೆ ಭೇಟಿ ಕೊಟ್ಟಿದ್ದಾರೆ. ಚುನಾವಣೆಗಾಗಿ ಡಿವೈಎಸ್ಪಿ, ಸಿಪಿಐ ಮತ್ತು ನನ್ನ ಆಪ್ತ ಸಹಾಯಕರು ಇನ್ನಿತರರ ಮೇಲೆ ಹಲವಾರು ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಿ ವರ್ಗಾವಣೆ ಮಾಡಿಸಿದ್ದಾರೆ. ನನ್ನ ವಾಹನವನ್ನು ದಿನವೂ ತಪಾಷಣೆ ಮಾಡಿಸುತ್ತಿದ್ದಾರೆ. ಇದೆಲ್ಲಾ ಮಾಜಿ ಪ್ರದಾನಿಯಾದವರಿಗೆ ಶೋಭೆ ತರುವುದಿಲ್ಲ ಎಂದು ಅವರು ಕಿಡಿಕಾರಿದರು.
ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ದೇವೇಗೌಡ ಮತ್ತು ಅವರ ಪುತ್ರ ಕುಮಾರಸ್ವಾಮಿಯವರು ನನ್ನ ವಿರುದ್ದ ಷಡ್ಯಂತ್ರ ಮಾಡುತ್ತಿದ್ದಾರೆ. ಅವರ ಈ ಕುತಂತ್ರಗಳಿಗೆಲ್ಲಾ ನಾನಾಗಲಿ ನನ್ನ ಬೆಂಬಲಿಗರಾಗಲಿ ಜಗ್ಗುವುದಿಲ್ಲ. ಮಾಜಿ ಪ್ರದಾನಿಗಳ ಈ ಕೆಳಮಟ್ಟದ ರಾಜಕಾರದಿಂದ ಕ್ಷೆತ್ರದದಲ್ಲಿ ನಮ್ಮ ಶಕ್ತಿ ಮತ್ತಷ್ಟು ಹೆಚ್ಚುತ್ತಿದೆ. ಬೆಂಬಲಿಗರು, ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಚುನಾವಣೆ ಎದುರಿಸಬೇಕು ಎಂದು ಅವರು ಕರೆ ನೀಡಿದರು.