ಚುನಾವಣೆ ನಂತರ ನಾನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ: ಯಡಿಯೂರಪ್ಪ
ಸೊರಬ,ಮೇ.02: ಚುನಾವಣೆ ನಂತರ ನಾನೇ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಸೊರಬ ತಾಲೂಕಿನ ದಂಡಾವತಿ ಯೋಜನೆಯನ್ನು ಮಂಜೂರು ಹಾಗೂ ಅನುಷ್ಠಾನ ಮಾಡದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಮತ್ತೆ ಕರೆಯಬೇಡಿ. ಇದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬುಧವಾರ ಆನವಟ್ಟಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದೆಯೂ ನಾನು ನುಡಿದಂತೆ ದಂಡಾವತಿ ಯೋಜನೆಯನ್ನು ಮಂಜೂರು ಮಾಡಿದ್ದೆ, ಆ ಭಾಗದಿಂದ ಬಂದಷ್ಟು ಪ್ರತಿರೋಧ ಈ ಭಾಗದಿಂದ ಬರಲಿಲ್ಲ. ಯೋಜನೆಗಾಗಿ ಮುಂಗಡ ಹಣ ಬಿಡುಗಡೆ ಮಾಡಿದ್ದರೂ ಯೋಜನೆ ನಿರ್ಮಾಣ ಮಾಡಲು ತೊಡಕಾಯಿತು. ಹಾಲಿ ಶಾಸಕ ಮಧು ಬಂಗಾರಪ್ಪನವರು ವಯಸ್ಸಿಗೆ ಮೀರಿ ನಾಲಿಗೆ ಹರಿ ಬಿಡುತ್ತಿದ್ದಾರೆ. ಸ್ಥಳೀಯ ಶಾಸಕರು ಹಣ ಹೆಂಡ, ತೋಳ್ಬಲ ಮೂಲಕ ಚುನಾವಣೆಯಲ್ಲಿ ಮತ ಯಾಚಿಸಲು ಹೋಗುತ್ತಿದ್ದಾರೆ. ಕುಮಾರ್ ಬಂಗಾರಪ್ಪ ಮತ್ತು ಹಾಲಪ್ಪ 20 ಸಾವಿರಕ್ಕಿಂತಲೂ ಅಧಿಕ ಮತ ಪಡೆದು ನಾನು ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ನನಗೆ ಸಾಥ್ ನೀಡಲಿದ್ದಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮುಖ್ಯ ಮಂತ್ರಿಯಾದ ನಂತರ ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ಹಣವನ್ನು ನೀರಾವರಿಗಾಗಿ ಮೀಸಲಿಡುತ್ತೇನೆ. ಅದರಲ್ಲಿ ಹೆಚ್ಚಿನ ಪಾಲು ಶಿವಮೊಗ್ಗ ಜಿಲ್ಲೆ ಹಾಗೂ ಸೊರಬ ತಾಲೂಕಿಗೆ ದೊರೆಯಲಿದೆ. ಕಚವಿ-ಮೂಡಿ ಏತ ನೀರಾವರಿ ಯೋಜೆನಗಳನ್ನು ಅನುಷ್ಠಾನಗೊಳಿಸುವ ಭರವಸೆ ನೀಡುತ್ತಿದ್ದೇನೆ ಎಂದರು.
ಬಿ.ಜೆ.ಪಿ ಸರ್ಕಾರ ನೀಡಿದಷ್ಟು ರೈತ ಪರ ಯೋಜನೆಗಳನ್ನು ಬೇರೆ ಯಾವುದೇ ಸರ್ಕಾರವೂ ನೀಡಲಿಲ್ಲ. ಕೇಂದ್ರ ಸರ್ಕಾರ 1250/- ರೂಗೆ ಮೆಕ್ಕೆ ಜೋಳ ಖರೀದಿಸಲು ಘೋಷಣೆ ಮಾಡಿದ್ದರೂ ರಾಜ್ಯ ಸರ್ಕಾರ ಖರೀದಿಗೆ ಮುಂದಾಗಲಿಲ್ಲ. ಮುಂದಿನ ದಿನಗಳಲ್ಲಿ 1500/- ರೂ ಬೆಂಬಲ ಬೆಲೆಗೆ ಮೆಕ್ಕೆ ಜೋಳ ಕರೀದಿಸಲು ಸರ್ಕಾರದಿಂದ ಆದೇಶ ಮಾಡಲಾಗುವುದು. ಇದರಿಂದ ಸರ್ಕಾರಕ್ಕೆ ಹದಿನೈದು ಸಾವಿರ ಕೋಟಿ ರೂ ಹೊರೆ ಬಿದ್ದರು ಚಿಂತಿಸದೆ ರೈತರ ಪರ ನಿಲ್ಲುತ್ತೇನೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು. ಬೆಳೆ ಸಾಲ, ಸಹಕಾರಿ ಸಾಲ, ಅಸಾದಿ ಸಾಲ, ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಮಾಡುವುದಲ್ಲದೆ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಸಾಲವನ್ನೂ ಕೂಡ ಮನ್ನಾ ಮಾಡಲಾಗುವುದು ಎಂದರು.
ಸಿದ್ದರಾಮಯ್ಯನವರು ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ. ಬಾದಾಮಿ ಮತ್ತು ವರುಣಾ ದಲ್ಲಿ ಅವರು ಗೆಲ್ಲುವುದೇ ಇಲ್ಲ. ಇನ್ನು ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೇಗೆ ಸಾಧ್ಯ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರ ದಿವಾಳಿಯಾಗಿದೆ. ಹಣ, ಹೆಂಡ, ತೋಳ್ಬಲ ಹಾಗೂ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಸಮಾಜಗಳನ್ನು ಒಡೆದು ಅದರ ಸಮಾಧಿಯ ಮೇಲೆ ರಾಜ್ಯ ಆಳಲು ಹೋಗುತ್ತಿದ್ದಾರೆ. ಬಿಜೆಪಿ ರಾಜ್ಯದ ಎಲ್ಲಾ ಜನಾಂಗಗಳ ಮೆಚ್ಚುಗೆ ಪಡೆದಿದ್ದು, ಕಾಂಗ್ರೆಸ್ ಮುಕ್ತ 22 ನೇ ರಾಜ್ಯವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎ.ಎಲ್ ಅರವಿಂದ, ಜಿಲ್ಲಾಧ್ಯಕ್ಷ ಎಸ್ ರುದ್ರಗೌಡ, ಮಾಜಿ ಶಾಸಕರಾದ ಸ್ವಾಮೀರಾವ್, ಬಿ.ಜಿ ಪುಟ್ಟಸ್ವಾಮಿ, ಪದ್ಮನಾಭ್ ಭಟ್, ತಾ.ಪಂ ಅಧ್ಯಕ್ಷೆ ನಯನ ಶ್ರೀಪಾದ ಹೆಗಡೆ, ಜಿ.ಪಂ ಸದಸ್ಯ ಸತೀಶ್ ಅಂಜನಪ್ಪ, ತಾ.ಪಂ ಸದಸ್ಯರಾದ ಹನುಮಂತಪ್ಪ.ಪಿ, ಪುರುಷೋತ್ತಮ, ಶ್ರೀಪಾದ ಹೆಗಡೆ, ಪಾಣಿ ರಾಜಪ್ಪ, ನಿರಂಜನ್ ಕುಪ್ಪಗಡ್ಡೆ, ಉಮೇಶ್ ಉಡುಗಣಿ, ಕೃಷ್ಣಮೂರ್ತಿ, ಗಜಾನನ್ ರಾವ್, ಮಂಜಪ್ಪ ಮರಬದ್ರ ಮತ್ತಿತರರು ಹಾಜರಿದ್ದರು.