ಎಲ್ಲಾ ಪಕ್ಷದ ಪರ ಪ್ರಚಾರ ಮಾಡುವ ಚಲನಚಿತ್ರ ನಟರಿಗೆ ಬದ್ಧತೆ ಇದೆಯಾ: ಕುಮಾರಸ್ವಾಮಿ ಪ್ರಶ್ನೆ
ಹಾಸನ,ಮೇ.06: ಎಲ್ಲಾ ಪಕ್ಷಗಳಲ್ಲೂ ಗುರುತಿಸುಕೊಂಡು ಪ್ರಚಾರ ಮಾಡುತ್ತಿರುವ ಚಲನಚಿತ್ರ ನಟರಿಗೆ ಯಾವ ಬದ್ಧತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗೊರೂರು ಸಂತೇಮಳದಲ್ಲಿ ಜೆಡಿಎಸ್ ಪಕ್ಷದಿಂದ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಚಲನಚಿತ್ರ ನಾಯಕ ನಟನೊಬ್ಬ ಹಾಸನದಲ್ಲಿ ಬೆಳಿಗ್ಗೆ ಜೆಡಿಎಸ್ ಪಕ್ಷದ ಪರ ಮತಯಾಚನೆ ಮಾಡಿ ಮಧ್ಯಾಹ್ನ ಸಕಲೇಶಪುರದಲ್ಲಿ ಬಿಜೆಪಿ ಪರ ಮತ ನೀಡಿ ಎಂದು ಹೇಳಿದ್ದಾರೆ. ಇವರಿಗೆ ಯಾವ ಬದ್ಧತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕರಿಗೆ ರಾಜಕೀಯದ ಯಾವ ಪ್ರಜ್ಞೆಯೂ ಇರುವುದಿಲ್ಲ. ಅಂತಹವರು ಚುನಾವಣೆ ಪ್ರಚಾರಕ್ಕೆ ಬಂದರೆ ಮತದಾರ ಪ್ರಜೆಗಳು ಮರುಳಾಗುವುದಿಲ್ಲ ಎಂದು ಎಚ್ಚರಿಸಿದರು. ನಾನು ಹೋರಾಟ ಮಾಡುತ್ತಿರುವುದು ರಾಜ್ಯದ ಎಲ್ಲರು ನೆಮ್ಮದಿಯಿಂದ ಇರಲು. ಜನಪರ ಆಡಳಿತ ಕೊಡಬೇಕು ಎಂಬುದು ನನ್ನ ಉದ್ದೇಶವಾಗಿದೆ. ನಾವು ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ರೈತರ ಬಗ್ಗೆ ಗಮನ ಕೊಡಲಾಗಿದೆ ಎಂದರು.
ಗೊರೂರು ಹೇಮಾವತಿ ಜಲಾಶಯ ಆವರಣವನ್ನು ಕೆಆರ್ಎಸ್ ಮಾದರಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಇಂತಹ ಹತ್ತಾರು ಯೋಜನೆಗಳ ಅನುಷ್ಠಾನಕ್ಕೆ ಮತದಾರರಾದ ನೀವು ಶಕ್ತಿ ತುಂಬಬೇಕು. ರೈತರ ಸಾಲಮನ್ನಾದ ಜೊತೆಯಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸಾಲವನ್ನು ಮನ್ನಾ ಮಾಡುವಂತೆ ಮನವಿಗಳು ಬಂದಿದೆ. ಈ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವಯೋವೃದ್ಧ ತಂದೆ, ತಾಯಂದಿರು ತಮ್ಮ ಜೀವಿತ ಅವಧಿಯಲ್ಲಿ ದುಃಖದಿಂದ ಇರಬಾರದು ಎಂದು ಮಾಸಿಕ 5 ಸಾವಿರ ಮಾಸಾಶನ ನೀಡುವ ಬಗ್ಗೆ ಚಿಂತಿಸಿದ್ದೇನೆ. ಇಂತಹ ಹಲವಾರು ಯೋಜನೆಗಳನ್ನು ಜೆಡಿಎಸ್ ಆಡಳಿತದಲ್ಲಿ ತರುವುದಾಗಿ ಭರವಸೆ ನೀಡಿದರು. ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ತರಲು ಮತ್ತು ಈ ಕ್ಷೇತ್ರದಲ್ಲಿ ಅಭಿವೃದ್ಧಿಗೊಳಿಸಲು ಸಹಕರಿಸುವಂತೆ ಇದೆ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಕಲೇಶಪುರ-ಆಲೂರು-ಕಟ್ಟಾಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ. ಕುಮಾರಸ್ವಾಮಿ, ಮಧುಬಂಗಾರಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.