ಹಾವೇರಿ: ಕೃಷಿ ಹೊಂಡಕ್ಕೆ ಹಾರಿ ಪುತ್ರನೊಂದಿಗೆ ರೈತ ಆತ್ಮಹತ್ಯೆ

Update: 2018-05-13 15:20 GMT

ಹಾವೇರಿ, ಮೇ 13: ಸಾಲಬಾಧೆಯಿಂದ ಮನನೊಂದು ರೈತನೋರ್ವ ತನ್ನ ಆರು ವರ್ಷದ ಮಗನೊಂದಿಗೆ ತನ್ನ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಂಕರಿಪುರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ರೈತನನ್ನು ಮಂಜಪ್ಪಕಲ್ಲಮ್ಮನವರ (40), ಹಾಗೂ ಆತನ ಪುತ್ರ ಲಿಂಗರಾಜ (6) ಎಂದು ಗುರುತಿಸಲಾಗಿದೆ.

ಇಪ್ಪತ್ತೈದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ರೈತ ಮಂಜಪ್ಪ ವಿವಿಧ ಬ್ಯಾಂಕುಗಳು ಹಾಗೂ ಲೇವಾದೇವಿಗಾರರಿಂದ ಸುಮಾರು 20ಲಕ್ಷ ರೂ.ಗಳಷ್ಟು ಸಾಲ ಮಾಡಿಕೊಂಡಿದ್ದರು. ಎರಡು ವರ್ಷಗಳಿಂದ ಎಲೆಕೋಸು (ಕ್ಯಾಬೇಜ್) ಬೆಳೆ ಕೈಕೊಟ್ಟಿದ್ದರಿಂದ ಸಾಲ ಮರುಪಾವತಿ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಆ ಹಿನ್ನೆಲೆಯಲ್ಲಿ ರವಿವಾರ ಮನೆಯಿಂದ ಪುತ್ರನೊಂದಿಗೆ ಜಮೀನಿಗೆ ತೆರಳಿದ ಮಂಜಪ್ಪ ಕೃಷಿ ಹೊಂಡಕ್ಕೆ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News