ಓ ಮೆಣಸೇ...

Update: 2018-05-14 07:55 GMT

ಕಾಂಗ್ರೆಸ್‌ನವರು ಮುಧೋಳ ನಾಯಿ ನೋಡಿ ದೇಶಭಕ್ತಿ ತಿಳಿದುಕೊಳ್ಳಬೇಕು - ನರೇಂದ್ರಮೋದಿ, ಪ್ರಧಾನಿ

ನೀವು ಯಾವ ನಾಯಿ ನೋಡಿ ದೇಶಭಕ್ತಿ ಕಲಿತುಕೊಂಡಿರಿ?

---------------------

ನಾನು ನನ್ನ ಜೀವನವನ್ನು ರೈತರಿಗಾಗಿ ಮುಡುಪಾಗಿಟ್ಟವನು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ,

ಅಂದರೆ ರೈತರಿಗೆ ಗುಂಡು ಹಾರಿಸುವುದಕ್ಕಾಗಿ ಜೀವನ ಮುಡಿಪೇ?

---------------------
ಜೆಡಿಎಸ್‌ಗೆ ಬಹುಮತ ಬಾರದೇ ಇದ್ದಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ - ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
ಅವರೇ ನಿಮ್ಮ ಬಾಗಿಲಿಗೆ ಬರುತ್ತಾರೆ ಎಂಬ ಧೈರ್ಯವೇ?
---------------------
ಬಾಲ್ಯ ವಿವಾಹ ನಿಷೇಧವೇ ಲವ್‌ಜಿಹಾದ್‌ಗೆ ಕಾರಣ - ಗೋಪಾಲ್ ಪಾರ್ಮರ್, ಮಧ್ಯಪ್ರದೇಶ ಶಾಸಕ

ಲವ್ ಜಿಹಾದ್ ನಡೆಸುವುದಕ್ಕಾಗಿಯೇ ಬಾಲ್ಯ ವಿವಾಹ ನಿಷೇಧಿಸಿರಬಹುದೆ?
---------------------
 
2019ರ ಲೋಕಸಭೆ ಚುನಾವಣೆ ಪಾಂಡವರು ಮತ್ತು ಕೌರವರ ನಡುವಿನ ಧರ್ಮಯುದ್ಧ - ಸುರೇಂದ್ರ ಸಿಂಗ್, ಬಿಜೆಪಿ ಶಾಸಕ

ಪಾಂಡವರು ಮತ್ತು ಕೌರವರ ನಡುವಿನ ಜೂಜಾಟ ಎಂದರೆ ಅರ್ಥಪೂರ್ಣ.

---------------------

ಎಲ್ಲರ ಕಲ್ಯಾಣಕ್ಕಾಗಿ ಜೆಡಿಎಸ್-ಬಿಎಸ್ಪಿ ಮಹಾಮೈತ್ರಿ- ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ

ಆ ಎಲ್ಲರಲ್ಲಿ ಬಿಜೆಪಿಯೂ ಸೇರಿದೆ ಎಂಬ ಆರೋಪವಿದೆ.

---------------------
 
ರಾಜ್ಯದಲ್ಲಿ ಬದಲಾವಣೆಯ ಸಮಯ ಸಮೀಪಿಸುತ್ತಿದೆ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

ನಿಮ್ಮಲ್ಲಿ ಹೊಸದಾಗಿ ಬದಲಾವಣೆಗಳೇನಾದರೂ ಇದೆಯೇ?

---------------------
ಸಿದ್ದರಾಮಯ್ಯರ ದುರಹಂಕಾರದಿಂದ ಈ ಬಾರಿ ಕಾಂಗ್ರೆಸ್ ನೆಲಕಚ್ಚುತ್ತದೆ - ಶ್ರೀನಿವಾಸ್ ಪ್ರಸಾದ, ಮಾಜಿ ಸಚಿವ

ಒಟ್ಟಿನಲ್ಲಿ ಸಿದ್ದರಾಮಯ್ಯ ನೆಲಕಚ್ಚಿದರೆ ನಿಮ್ಮ ಆಸೆ ಈಡೇರಿದಂತೆ.

---------------------
ಸರಕಾರ ರಚನೆಗಾಗಿ ನಾವು ರಾಜಕೀಯ ಮಾಡುತ್ತಿಲ್ಲ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

ರಾಜ್ಯದಲ್ಲಿ ಯಡಿಯೂರಪ್ಪರನ್ನು ಕಸದ ಬುಟ್ಟಿಗೆ ಹಾಕುವ ರಾಜಕೀಯ ನಡೆಯುತ್ತಿದೆಯಂತೆ.

---------------------
 
ಮೋದಿ ಬಿರುಗಾಳಿಯಾದರೆ ಕಾಂಗ್ರೆಸ್ ಹೆಬ್ಬಂಡೆ - ಡಾ.ಜಿ.ಪರಮೇಶ್ವರ್,ಕೆಪಿಸಿಸಿ ಅಧ್ಯಕ್ಷ

ಮತದಾರರು ಆ ಬಂಡೆಗೆ ತಲೆಚಚ್ಚಿಕೊಂಡಂತಾಯಿತು.

---------------------

ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಅವರಪ್ಪ ಮುಖ್ಯಮಂತ್ರಿಯಾಗಿದ್ದಾರೆ, ನಾನೇಕೆ ಸಿಎಂ ಆಗಬಾರದು? - ಡಿ.ಕೆ.ಶಿವಕುಮಾರ್, ಸಚಿವ

ದೇವೇಗೌಡರ ಕುಟುಂಬದ ಸದಸ್ಯರಾಗಿದ್ದರೆ ನೀವು ಆಗಬಹುದಿತ್ತೇನೋ?

---------------------

ರಾಜ್ಯದಲ್ಲಿ ಬಿಜೆಪಿ ಗೆದ್ದರೆ ಆರು ತಿಂಗಳಲ್ಲಿ ಮಹಾದಾಯಿ ಸಮಸ್ಯೆಗೆ ಪರಿಹಾರ - ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಇಲ್ಲವಾದರೆ ಪರಿಹರಿಸಲು ಬಿಡುವುದಿಲ್ಲ ಎಂದಾಯಿತು.

---------------------
ಹಿಂದೆ ದ್ರೋಹ ಮಾಡಿದ ಜೆಡಿಎಸ್ ಜೊತೆ ಮೈತ್ರಿ ಇಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ದ್ರೋಹ ಮಾಡದ ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧ್ಯತೆ ಇದೆಯೇ?
---------------------
 
ಈ ಬಾರಿಯದು ನನ್ನ ಕಡೆಯ ಚುನಾವಣೆ ಪ್ರಚಾರ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನೂ ಸೇರಿಸಬೇಕಾಗಿತ್ತು.

---------------------
ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನು ಜೀವನದಲ್ಲಿ ದೊಡ್ಡ ತಪ್ಪು ಮಾಡಿದೆ - ರಾಮ್‌ ಜೇಠ್ಮಲಾನಿ, ಹಿರಿಯ ನ್ಯಾಯವಾದಿ

ಅಡ್ವಾಣಿಯವರದೂ ಅದೇ ಅಳಲು.

---------------------

ಅವಕಾಶವಾದಿಗಳು ಪಕ್ಷದ ಒಳಗೆ ಇರುವ ಬದಲು ಹೊರಗಡೆ ಇರುವುದು ಒಳ್ಳೆಯದು - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಹೊರಗೆ ಹೋಗುವವರೆಗೆ ಅವರು ಯಾವ ವಾದಿಗಳು ಎಂದು ಗೊತ್ತಾಗುವುದಿಲ್ಲ, ಬಿಡಿ.

---------------------

ಹಿಂದೂ ಸಮಾಜ ಒಂದು ವಿಚಿತ್ರವಾದ ಸ್ಥಿತಿಯಲ್ಲಿದೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

ಅದಕ್ಕೆ ನಿಮ್ಮ ಕೊಡುಗೆಯಂತೂ ಅಪಾರ.

---------------------
 
ಕರ್ನಾಟಕ ಜಿಹಾದಿಗಳ ಅಡ್ಡೆ - ಆದಿತ್ಯನಾಥ್, ಉ.ಪ್ರದೇಶ ಮುಖ್ಯಮಂತ್ರಿ

ಉತ್ತರ ಪ್ರದೇಶದ ಬೀದಿನಾಯಿಗಳ ಕಡೆಗೆ ಗಮನ ಹರಿಸಿ.

---------------------
 
ಬಿಜೆಪಿ ಗಟ್ಟಿಯಾಗಲು ಕಾಂಗ್ರೆಸ್ಸೇ ಕಾರಣ - ಅಸದುದ್ದೀನ್ ಉವೈಸಿ, ಎಐಎಂಐಎಂ ಸ್ಥಾಪಕ

ನೀವು ಗಟ್ಟಿಯಾಗಲು ಬಿಜೆಪಿ ಕಾರಣ ಎಂದು ಆರೋಪವಿದೆ.

---------------------
ನರೇಂದ್ರ ಮೋದಿ ಪಿಎಂ ಅಂದರೆ, ಪಂಚಾಯತ್ ಮೆಂಬರ್ ಅನ್ನುವಷ್ಟರ ಮಟ್ಟಿಗೆ ಇಳಿದಿದ್ದಾರೆ - ಬಿ.ಕೆ.ಹರಿಪ್ರಸಾದ್, ಎಐಸಿಸಿ ಪ್ರ.ಕಾರ್ಯದರ್ಶಿ

ತಳಮಟ್ಟದ ನಾಯಕ ಎಂದು ಹೊಗಳಿದಂತಾಯಿತು.

---------------------
 
ಐಟಿ ಅಧಿಕಾರಿಗಳು ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ - ಸಿ.ಎಂ.ಇಬ್ರಾಹೀಂ, ವಿ.ಪ.ಸದಸ್ಯ

ಗುಡ್ಡದ ಬದಲು, ಕೆಲವರ ಮನೆಗಳನ್ನು ಅಗೆದರೆ ಹುಲಿಯೂ ಸಿಗಬಹುದು.

---------------------
ಮೋದಿಯ ಬಣ್ಣದ ಮಾತುಗಳಿಂದ ಬಡವರ ಹೊಟ್ಟೆ ತುಂಬುವುದಿಲ್ಲ - ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ

ಗೆದ್ದರೆ ರೇಷನ್ ಅಂಗಡಿಗಳಲ್ಲಿ ಮೋದಿ ಭಾಷಣದ ಸಿಡಿಗಳನ್ನು ತೂಕ ಮಾಡಿ ಬಡವರಿಗೆ ಹಂಚಲಿದ್ದಾರಂತೆ.

---------------------
ಮತದಾನ ಮಾಡದಿರುವುದು ಮಹಾಪಾಪ - ರಾಘವೇಶ್ವರ ಸ್ವಾಮೀಜಿ , ರಾಮಚಂದ್ರಾಪುರ ಮಠ

ಹಾಗಾದರೆ ಅತ್ಯಾಚಾರ?
---------------------
 
ದಲಿತ ಅನ್ನುವ ಕಾರಣಕ್ಕೆ ಪುನಃ ಪುನಃ ಮುಖ್ಯಮಂತ್ರಿ ಸ್ಥಾನ ಕೇಳುವುದು ಮುಜುಗರದ ವಿಚಾರ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಬೇರೆ ಕಾರಣವನ್ನು ಮುಂದೊಡ್ಡಿ ಮುಖ್ಯಮಂತ್ರಿ ಸ್ಥಾನ ಕೇಳುತ್ತೀರಿ ಎಂದಾಯಿತು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...