ವಿಜಯೋತ್ಸವ ಆಯೋಜನೆಗೆ ಪರವಾನಿಗೆ ಅತ್ಯಗತ್ಯ: ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು, ಮೇ 14: ಈ ಬಾರಿ ಮೇ 12ರಂದು ನಡೆದ ಮತದಾನದ ವೇಳೆ ಜಿಲ್ಲೆಯಾದ್ಯಂತ ಒಂದೇ ಒಂದು ಎಫ್ಐರ್ ದಾಖಲಾಗಿಲ್ಲ. 2013ರ ಚುನಾವಣೆ ವೇಳೆ ಜಿಲ್ಲೆಯಾದ್ಯಂತ 8 ಪ್ರಕರಣಗಳು ದಾಖಲಾಗಿದ್ದವು. ಇದಕ್ಕೆ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸಿದ್ದ ಪೊಲೀಸ್, ಅರೆಸೇನಾ ಪಡೆಗಳ ಸಿಬ್ಬಂದಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೆ ಕಾರಣ. ವಿಶೇಷವಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಈ ಭಾಗದ ಹಂಚಿನಕುಡಿಗೆ ಮತಗಟ್ಟೆಯಲ್ಲಿ ಶೇ.97 ಮತದಾನವಾಗಿದ್ದು, ಇದು ಈ ಭಾಗದ ಜನತೆ ನಕ್ಸಲ್ ಚಳವಳಿಯಿಂದ ವಿಮುಖರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಚಿಕ್ಕಮಗಳೂರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಮಲೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 12 ಚುನಾವಣೆ ಶಾಂತಿಯುತವಾಗಿ ನಡೆಯಲು ಜಿಲ್ಲಾಧಿಕಾರಿ, ಎಸಿ, ಸಿಇಒ ಹಾಗೂ ಜಿಲ್ಲೆಯ ಜನತೆ ಉತ್ತಮ ಸಹಕಾರ ನೀಡಿದ್ದಾರೆಂದು ಶ್ಲಾಘಿಸಿದ ಅವರು, ಮೇ 15ರಂದು ಮಂಗಳವಾರ ನಡೆಯಲಿರುವ ಮತ ಎಣಿಕೆ ಕಾರ್ಯ ನಿಮಿತ್ತ ನಗರದ ಎಸ್ಟಿಜೆ ಕಾಲೇಜಿನಲ್ಲಿ ಅಗತ್ಯ ಭದ್ರತೆಯನ್ನು ಕಲ್ಪಿಸಲಾಗಿದೆ. ಭದ್ರತೆಗಾಗಿ ಸ್ಥಳೀಯ ಪೊಲೀಸರನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಬಳಿ 550 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಮತ ಎಣಿಕೆ ಬಳಿಕೆ ನಗರದದಲ್ಲಿ ವಿಜೇತ ಅಭ್ಯರ್ಥಿಗಳ ಪರವಾಗಿ ವಿಜಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆಯುವುದು ಅಗತ್ಯ. ತಾಲೂಕು ಕೇಂದ್ರಗಳಲ್ಲೂ ವಿಜೇತ ಅಭ್ಯರ್ಥಿಗಳ ಪರ ಮೆರವಣಿಗೆ ನಡೆಸಲು ಪರವಾನಿಗೆ ಅತ್ಯಗತ್ಯ. ಈ ಬಗ್ಗೆ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ವಿಜಯೋತ್ಸವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದ ಅವರು, ಮಂಗಳವಾರ ಮತ ಎಣಿಕೆ ಹಿನ್ನೆಯಲ್ಲಿ ಜಿಲ್ಲಾದ್ಯಂತ ಸುಮಾರು 1200-1300 ಭದ್ರತಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆಂದು ಎಸ್ಪಿ ಮಾಹಿತಿ ನೀಡಿದರು.
ಕೇಂದ್ರ ಸರಕಾರ ನಕ್ಸಲ್ ಪೀಡಿತ ಪ್ರದೇಶಗಳಿಗೆ ದೇಶದ ವಿವಿಧೆಡೆ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ನೀಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ವಿಶೇಷ ಪೊಲೀಸ್ ಠಾಣೆಗಳನ್ನು ನೀಡಿಲ್ಲ. ಈ ಹಿಂದೆ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಕ್ಸಲರು ಚಳವಳಿ ಆರಂಭಿಸಿದ್ದರು. ಇದು ಪ್ರಸಕ್ತ ಹಂತಹಂತವಾಗಿ ಕ್ಷೀಣಗೊಂಡಿದ್ದು, ನಕ್ಸಲರ ಪ್ರಭಾವದಿಂದ ಜಿಲ್ಲೆ ಮುಕ್ತವಾಗಿದೆ. ಕಳೆದ 15 ವರ್ಷಗಳಲ್ಲಿ ಜಿಲ್ಲೆಯ ಯುವಕ ಯುವತಿಯರು ನಕ್ಸಲ್ ಗುಂಪಿಗೆ ಸೇರಿರುವ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಆದರೂ ಈ ಹಿಂದೆ ಜಿಲ್ಲೆಯಲ್ಲಿದ್ದ ನಕ್ಸಲ್ ಚಳವಳಿಯ ಪ್ರಭಾವ ಸಂಪೂರ್ಣವಾಗಿ ಹೋಗುವವರೆಗೂ ನಕ್ಸಲ್ ಪೀಡಿತ ಪ್ರದೇಶಗಳು ಎಂದು ಕರೆಯುವುದು ಅನಿವಾರ್ಯವಾಗಲಿದೆ ಎಂದು ಎಸ್ಪಿ ಅಣ್ಣಾಮಲೈ ನಕ್ಸಲ್ ಪೀಡಿತ ಪ್ರದೇಶಗಳು ಎಂಬ ಹೆಸರಿನಿಂದ ಈ ಭಾಗಗಳನ್ನು ಕರೆಯುವಂತಿಲ್ಲ ಎಂದು ರಾಜ್ಯ ಸರಕಾರ ಘೋಷಿಸಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.