×
Ad

ಚಿಕ್ಕಮಗಳೂರು: ವಿಶ್ವ ತಾಯಂದಿರ ದಿನಾಚರಣೆ

Update: 2018-05-14 18:07 IST

ಚಿಕ್ಕಮಗಳೂರು,ಮೇ.14: ನೋವು ದುಃಖವನ್ನೆಲ್ಲ ಒಳಗಿಟ್ಟುಕೊಂಡರೂ ಮನೆಮಂದಿಗೆಲ್ಲ ಸಂತಸವನ್ನು ಹಂಚುವವಳು ತಾಯಿ ಎಂದು ಸಾಮಾಜಿಕ ಕಾರ್ಯಕರ್ತೆ ಪಲ್ಲವಿ ಸಿ.ಟಿ.ರವಿ ಹೇಳಿದರು.

ಶ್ರೀಪಾರ್ವತಿ ಮಹಿಳಾಮಂಡಳಿ ಮತ್ತು ಶ್ರೀದೇವಿ ಗುರುಕುಲದ ಸಂಯುಕ್ತಾಶ್ರಯದಲ್ಲಿ  ನಗರದ ಸುವರ್ಣಮಾಧ್ಯಮ ಭವನ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಮಾತನಾಡಿದರು.

ತ್ಯಾಗ, ಪ್ರೀತಿ-ವಿಶ್ವಾಸದ ಗಣಿಯೆ ತಾಯಿ. ಒಗ್ಗೂಡಿಸುವ ಶಕ್ತಿ ಆಕೆ. ಮನೆಯ ಎಲ್ಲ ಸದಸ್ಯರ ಒಳಿತಿಗೂ ಶ್ರಮಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ದುಡಿಯುವಾಕೆ. ಭಾರತೀಯ ಸಮಾಜದಲ್ಲಿ ತಾಯಿಗೆ ಅತ್ಯುನ್ನತ ಸ್ಥಾನವಿದೆ ಎಂದ ಅವರು, ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಇರುತ್ತದೆ. ಹಾಗೆಯೇ ಮಹಿಳೆಯ ಯಶಸ್ಸಿನಲ್ಲೂ ಪುರುಷರ ಪ್ರಭಾವ ಇರುತ್ತದೆ. ಮಹಿಳೆ ಮತ್ತು ಪುರುಷ ಎರಡೂ ಕೈ ಜೋಡಿಸಿದಾಗ ಸುಖಿ ಕುಟುಂಬ ನಮ್ಮದಾಗುತ್ತದೆ ಎಂದರು.

ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ರಕ್ತಬಸಿದು ಜೀವ ಕೊಡುವ ತಾಯಿ ತೇಯ್ದಷ್ಟೂ ಸುಗಂಧವನ್ನೇ ಬೀರುತ್ತಾಳೆ. ಭೂಮಿಗಿರುವಷ್ಟೇ ಸಹನೆ ತಾಯಿಗಿರುತ್ತದೆ. ತಾನು ಉರಿದು ಸುತ್ತಲಿನವರಿಗೆ ಬೆಳಕು ಕೊಡುವ ತ್ಯಾಗ-ಕಲ್ಯಾಣದ ಸಂಕೇತ ತಾಯಿ. ದೇವರು ಎಲ್ಲ ಕಡೆ ಇರಲಾಗದು. ಅದಕ್ಕಾಗಿಯೆ ಅಲ್ಲಲ್ಲಿ ತಾಯಿಯನ್ನು ಸೃಷ್ಟಿಮಾಡಿದ್ದಾನೆ ಎಂಬ ಆಂಗ್ಲೋಕ್ತಿಯನ್ನು ಉಲ್ಲೇಖಿಸಿದ ಅವರು, ಲೋಕಶಾಂತಿಗೆ ತಾಯಂದಿರ ಕೊಡುಗೆ ಅಪಾರ ಎಂದರು. 

ಶ್ರೀದೇವಿ ಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತಿ ಮಾತನಾಡಿ, ತಾಯಿಯ ಋಣ ಎಂದೂ ತೀರಿಸಲಾಗದು. ಬೆಳಗಾಗೆದ್ದು ತಾಯಿಯನ್ನು ಸ್ಮರಿಸುವ ಸಂಪ್ರದಾಯ ಇರುವಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ. ತಾಯಿಯ ಶಕ್ತಿ ಅಸಾಧಾರಣ ಮತ್ತು ಅಗಾಧವಾದದ್ದು. ತಾಯಿಯ ಆಶೀರ್ವಾದದ ಬಲದಿಂದ ಉನ್ನತಿ ಸಾಧ್ಯ ಎಂದರು.

ಶ್ರೀಪಾರ್ವತಿ ಮಹಿಳಾಮಂಡಳಿ ಅಧ್ಯಕ್ಷೆ ಸುಮಿತ್ರಾ ಶಾಸ್ತ್ರಿ ಸಮಾರಂಭ ಅಧ್ಯಕ್ಷತೆವಹಿಸಿ ಮಾತನಾಡಿ, ಜನ್ಮದಾತೆ, ಪ್ರಕೃತಿಮಾತೆ, ಗೋಮಾತೆಯನ್ನು ಸದಾ ಗೌರವಿಸಬೇಕು. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಅಮೂಲ್ಯವಾದದ್ದು. ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಿ ತಿದ್ದಿ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ತಾಯಿಯ ಪರಿಶ್ರಮ ತ್ಯಾಗ, ಪ್ರೀತಿ, ಹಾರೈಕೆ, ಅಂತಃಕರಣ ಮುಖ್ಯವಾಗಿರುತ್ತದೆ ಎಂದರು.

ಕಾರ್ಯದರ್ಶಿ ಭವಾನಿವಿಜಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ ರುಚಿ ಇಲ್ಲ. ಅತ್ಯಮೂಲ್ಯ ವಸ್ತು ಆಕೆ.  ಗುರುವಾಗಿ, ಸ್ನೇಹಿತೆಯಾಗಿ ಪ್ರೀತಿ-ವಿಶ್ವಾಸದ ಗಣಿಯಾಗಿ ಸಲಹುವ ತಾಯಿ ಜಗದವಂದನೀಯಳೆ ಎಂದರು.

ಹಿರಿಯ ಸದಸ್ಯೆ ರುದ್ರಮ್ಮ ರುದ್ರಪ್ಪ ಸಮಾರಂಭವನ್ನು ಉದ್ಘಾಟಿಸಿದರು. ಖಜಾಂಚಿ ಸೌಭಾಗ್ಯಜಯಣ್ಣ ಸ್ವಾಗತಿಸಿ, ಉಪಾಧ್ಯಕ್ಷೆ ಮಂಜುಳಾಮಹೇಶ್ ವಂದಿಸಿದರು. ಪದಾಧಿಕಾರಿಗಳಾದ ಶೈಲಾಬಸವರಾಜ್ ಪ್ರಾರ್ಥಿಸಿ, ಶ್ಯಾಮಲಾ ನಿರೂಪಿಸಿದರು. ತಾಯಿಯ ಮಹತ್ವ ಸಾರುವ ಗೀತೆಗಳ ಗಾಯನ ಗಮನಸೆಳೆಯಿತು. ಪಲ್ಲವಿರವಿ ಮತ್ತು ಚಟ್ನಳ್ಳಿ ಮಹೇಶ್‍ರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News