ರಾಜ್ಯಾದ್ಯಂತ ಮುಂದುವರಿದ ವರುಣನ ಆರ್ಭಟ
ಬೆಂಗಳೂರು, ಮೇ 14: ರಾಜ್ಯದ ವಿವಿಧೆಡೆ ವರುಣನ ಅಬ್ಬರ ಮುಂದುವರೆದಿದ್ದು, ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿಗಳು ಭಾರೀ ನಷ್ಟವಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೊಂದು ವಾರ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರೂ, ವಾಯವ್ಯ ಅಭಿಮುಖವಾಗಿ ಚಲಿಸುತ್ತಿರುವುದರಿಂದ ಅದರ ಪ್ರಮಾಣ ಕಡಿಮೆ. ಆದರೆ ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಮೋಡಗಳ ಸಾಲು ಹೆಚ್ಚಾಗಿರುವುದರಿಂದ ಮೇ 19 ರವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ, ಮಲೆನಾಡಿನ ಭಾಗದಲ್ಲಿ ಒಂದಲ್ಲ ಒಂದು ಸ್ಥಳಗಳಲ್ಲಿ ಮಳೆ ಮುಂದುವರಿಯಲಿದೆ. ಮೇ ತಿಂಗಳಲ್ಲಿ ಪೂರ್ವ ಮುಂಗಾರು ಮಳೆಯಾಗುವುದು ಸಹಜ. ಆದರೆ, ಈ ಬಾರಿ ಕೆಲವು ಸ್ಥಳಗಳಲ್ಲಿ ಮಳೆಯಾಗುತ್ತಿದೆ. ಈಗಿನ ಹವಾಮಾನ ಮುನ್ಸೂಚನೆ ಪ್ರಕಾರ ನೈರುತ್ಯ ಮುಂಗಾರು ಈ ತಿಂಗಳ ಅಂತ್ಯಕ್ಕೆ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಹೇಳಿದೆ.
ಕಳೆದ ಮೂರು ದಿನಗಳಿಂದ ವಿವಿಧೆಡೆ ಭಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಕಳೆದ ರಾತ್ರಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಸುರಿದ ಭಾರೀ ಬಿರುಗಾಳಿ ಮಳೆಗೆ 17ಕ್ಕೂ ಅಧಿಕ ಮನೆಗಳ ಹೆಂಚು, ಶೀಟ್ಗಳು ಹಾರಿ ಹೋಗಿವೆ. ರಾತ್ರಿ 11.30ರ ಸಮಯದಲ್ಲಿ ಆರಂಭವಾದ ಮಳೆ ಧಾರಾಕಾರವಾಗಿ ಸುರಿದ ಪರಿಣಾಮ ಹೆಂಚು, ಶೀಟ್ಗಳು ಪುಡಿಪುಡಿಯಾಗಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಕೆಲವೆಡೆ ಗಾಳಿಗೆ ಅಡಕೆ, ತೆಂಗಿನ ಮರಗಳು ಧರೆಗೆ ಉರುಳಿವೆ. ಲಕ್ಷಾಂತರ ರೂ. ಬೆಳೆಗಳು ನಷ್ಟವಾಗಿದ್ದು, ಒಟ್ಟಾರೆ ಅಕಾಲಿಕ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ಉದ್ಯಾನನಗರಿ ಬೆಂಗಳೂರಿನಲ್ಲಿ ಮಳೆ ಸುರಿದಿದ್ದು, ಅಂಡರ್ಪಾಸ್ಗಳು, ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸವಾರರು ಸಂಚಾರ ಮಾಡಲು ಪರದಾಡುವಂತಾಗಿತ್ತು.
ಹಾಸನದಲ್ಲಿ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಪಾತಪಾಳ್ಯದ ಬಳಿ ಮರವೊಂದು ಹಸುವಿನ ಮೇಲೆ ಉರುಳಿ ಬಿದ್ದ ಪರಿಣಾಮ ಹಸು ಸಾವನ್ನಪ್ಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾರೀ ಮಳೆ ಸದ್ದು ಮಾಡಿದ್ದು, ಅಪಾರ ಬೆಳೆ ನಷ್ಟವಾಗಿದೆ. ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಹಾಸನ, ಮಂಡ್ಯ, ಕೋಲಾರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.
ರಾಜ್ಯಾದ್ಯಂತ ಬಿಸಿಲಿನ ಝಳದಿಂದ ನಲುಗಿಹೋಗಿದ್ದ ಜನರಿಗೆ ಮಳೆ ತಂಪೆರೆದರೆ, ಮತ್ತೊಂದು ಕಡೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶ ಮಾಡಿದೆ. ಅಲ್ಲದೆ, ಹಲವರ ಪ್ರಾಣಾಪಾಯಕ್ಕೆ ಅಪಾಯ ತಂದೊಡ್ಡಿದೆ. ಮತ್ತೊಂದು ಕಡೆ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿಗೆ ನಷ್ಟವಾದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ.