ಹುಬ್ಬಳ್ಳಿ: ಕೇಂದ್ರೀಯ ವಿದ್ಯಾಲಯ ಪ್ರಾಂಶುಪಾಲನ ಬಂಧನ
Update: 2018-05-14 19:09 IST
ಹುಬ್ಬಳ್ಳಿ, ಮೇ 14: ವಿದ್ಯಾರ್ಥಿ ಪ್ರವೇಶಕ್ಕೆ 50 ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟ ಇಲ್ಲಿನ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಸಿದ್ಧಾರೂಢ ಮೇತ್ರೆ ಅವರನ್ನು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಸವರಾಜ್ ಸಣ್ಣಪೂಜಾರ್ ಎಂಬುವರು ತಮ್ಮ ಪುತ್ರ ಚೇತನ್ ಎಂಬವರನ್ನು ನಾಲ್ಕನೆ ತರಗತಿಗೆ ಸೇರಿಸಲು ಬಂದಾಗ ಅವರ ಬಳಿ 50 ಸಾವಿರ ರೂ.ಹಣದ ಬೇಡಿಕೆ ಇಟ್ಟಿದ್ದರು. ಹಣ ನೀಡಲು ಇಷ್ಟವಿಲ್ಲದ ಬಸವರಾಜ್ ಈ ಸಂಬಂಧ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು ಎನ್ನಲಾಗಿದೆ.
ಬೆಂಗಳೂರು ಸಿಬಿಐ ಘಟಕದಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 7ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಸಿದ್ಧಾರೂಢ ಅವರನ್ನು ಬಂಧಿಸಿ, ತನಿಖೆ ಕೈಗೊಂಡಿದೆ ಎಂದು ಗೊತ್ತಾಗಿದೆ.