×
Ad

ಸ್ವತಂತ್ರ ಸರಕಾರ ರಚನೆಗೆ ಅವಕಾಶ ಕೊಟ್ಟಿದ್ದರೆ 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತಿದ್ದೆ: ಕುಮಾರಸ್ವಾಮಿ

Update: 2018-05-22 17:39 IST

ಚಿಕ್ಕಮಗಳೂರು, ಮೇ 22: ರಾಜ್ಯದಲ್ಲಿ ಜೆಡಿಎಸ್ ಸರಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಪಕ್ಷದ ಚುನಾವಣಾ ಪ್ರನಾಳಿಕೆಯಲ್ಲಿ ಭರವಸೆ ನೀಡಿದ್ದೆ. ಆದರೆ ಜನತೆ ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಿಲ್ಲ, ಜನತೆ ತನಗೆ ಅಧಿಕಾರ ನೀಡಿಲ್ಲ. ಜೆಡಿಎಸ್ ಪಕ್ಷಕ್ಕೆ ಸ್ವಂತಂತ್ರವಾಗಿ ಸರಕಾರ ರಚನೆ ಮಾಡಲು ಜನತೆ ಅವಕಾಶ ಕೊಟ್ಟಿದ್ದರೆ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಿದ್ದೆ. ಸಾಲ ಮನ್ನಾದ ಬಗ್ಗೆ ನಾನೊಬ್ಬನೇ ತೀರ್ಮಾನ ಮಾಡುವಂತಿಲ್ಲ ಎಂದು ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಮಂಗಳವಾರ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಅನಿತಾ ಕುಮಾರಸ್ವಾಮಿ ಸೇರಿದಂತೆ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಲು ಮುಂದೆ ಬಂದಿರುವುದರಿಂದ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲಿರುವುದರಿಂದ ಸಾಲ ಮನ್ನಾ ಘೋಷಣೆ ಬಗ್ಗೆ ಈಗಲೇ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಪೂರ್ವದಲ್ಲಿ 'ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಸರಕಾರ ರಚನೆಗೆ ಅವಕಾಶ ನೀಡಿದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದೆ. ಆದರೆ ಜನತೆಗೆ ಅದ್ಯಾಕೋ ಈ ಸಾಲ ಮನ್ನಾ ಯೋಜನೆಯೇ ಬೇಡವಾಯಿತು. ತನ್ನ ಈ ಮಹತ್ವದ ಯೋಜನೆಗೆ ಜನತೆ ಒಪ್ಪಿಗೆ ನೀಡಿಲ್ಲ. ಸಾಲ ಮನ್ನಾ ಮಾಡುವ ಭರವಸೆಯನ್ನೇ ಜನತೆ ಲಘುವಾಗಿ ಪರಿಗಣಿಸಿದರು. ಈ ಯೋಜನೆಯೇ ಜನರಿಗೆ ಬೇಡವಾಗಿತ್ತೇನೋ ಎಂದು ಪ್ರಜ್ಞಾವಂತರು ತಮಾಷೆ ಮಾಡುತ್ತಿದ್ದಾರೆ. ಕೇವಲವಾಗಿ ಮಾತನಾಡುತ್ತಿದ್ದಾರೆ. ಜನತೆ ತಮ್ಮ ಪಕ್ಷಕ್ಕೆ ಅಧಿಕಾರ ನೀಡಿಲ್ಲ. ತನ್ನನ್ನು ಸಿಎಂ ಆಗಿ ಜನತೆ ಆಯ್ಕೆ ಮಾಡಿಲ್ಲ. ಹಾಗಾಗಿ ಸಾಲ ಮನ್ನಾ  ಭರವಸೆ ಈಡೇರಿಸುವ ಬಗ್ಗೆ ತಾನೊಬ್ಬನೇ ತೀರ್ಮಾನ ಮಾಡುವಂತಿಲ್ಲ. ಸಮ್ಮಿಶ್ರ ಸರಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಮುಖಂಡರನ್ನೂ ತಾನು ವಿಶ್ವಾಸಕ್ಕೆ ಪಡೆದು ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕಿದೆ ಎಂದು ನಿಯೋಜಿತ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಚುನಾವಣೆಯಲ್ಲಿ ಕೇವಲ 38 ಕ್ಷೇತ್ರಗಳಲ್ಲಿ ಮಾತ್ರ ಮತದಾರರು ಜೆಡಿಎಸ್ ಪಕ್ಷವನ್ನು ಕೈ ಹಿಡಿದಿದ್ದಾರೆ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ನೀಡಲಿಲ್ಲ. ಈ ಕಾರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರುವಂತಾಗಿದೆ. ಮೈತ್ರಿ ಸರಕಾರವಿದ್ದಾಗ ಜೆಡಿಎಸ್ ಪಕ್ಷದ ಪ್ರನಾಳಿಕೆಯನ್ನೇ ಯಥಾವತ್ ಜಾರಿಗೊಳಿಸಲು ಸಾಧ್ಯವಿಲ್ಲ. ಯಾವುದೇ ಘೋಷಣೆ, ಯೋಜನೆಗಳ ಜಾರಿ ಬಗ್ಗೆ ಎರಡೂ ಪಕ್ಷಗಳೂ ಹೊಂದಾಣಿಕೆಯಿಂದ ಪರಸ್ಪರ ಚರ್ಚೆ ನಡೆಸಿ ಮುಂದುವರಿಯಬೇಕಿದೆ ಎಂದ ಅವರು, ಕಾಂಗ್ರೆಸ್ ಪಕ್ಷವೂ ಚುನಾವಣಾ ಪ್ರನಾಳಿಕೆ ಬಿಡುಗಡೆ ಮಾಡಿದ್ದು, ರೈತರ ಹಾಗೂ ಸಾರ್ವಜನಿಕರ ನೆಮ್ಮದಿಯ ಬದುಕಿಗಾಗಿ ಸಾಲ ಮನ್ನಾ ಘೋಷಣೆ ಸೇರಿದಂತೆ ಎರಡೂ ಪಕ್ಷಗಳ ಚುನಾವಣಾ ಪ್ರನಾಳಿಕೆಗಳ ಜಾರಿ ಹಾಗೂ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಲ್ಯಾಣ ಕಾರ್ಯಕ್ರಮಗಳನ್ನೂ ಜಾರಿ ಮಾಡುವ ಬಗ್ಗೆ ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯುತ್ತೇನೆ. ಜನರ ಎಲ್ಲ ನಿರೀಕ್ಷೆಗಳನ್ನೂ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಕುಮಾರಸ್ವಾಮಿ ಇದೇ ವೇಳೆ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಸ್.ಎಲ್,ಭೋಜೇಗೌಡ, ಮಾಜಿ ಶಾಸಕ ಧರ್ಮೇಗೌಡ, ಎಚ್.ಎಚ್.ದೇವರಾಜ್, ಹರೀಶ್, ವೆಂಕಟೇಶ್, ಎಚ್.ಟಿ.ರಾಜೇಂದ್ರ ಮತ್ತಿತರ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

ನಿಯೋಜಿತ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ರೇವಣ್ಣ, ಅನಿತಾ ಕುಮಾರಸ್ವಾಮಿ ಸೇರಿದಂತೆ ದೇವೇಗೌಡ ಅವರ ಕುಟುಂಬದ ಸದಸ್ಯರು ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ವಿವಿಧ ಪೂಜೆ, ಯಾಗ, ಹೋಮಗಳನ್ನು ಕೈಗೊಂಡರು. ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಎರಡು ಪ್ರತ್ಯೇಕ ಹೆಲಿಕಾಪ್ಟರ್ ಗಳಲ್ಲಿ ಆಗಮಿಸಿದ್ದರು.  

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗಣ್ಯರ ದಂಡು:
ಸಮ್ಮಿಶ್ರ ಸರಕಾರ ರಚನೆ ತನ್ನ ಜೀವನದಲ್ಲಿ ಸಿಕ್ಕಿದ ಅತೀ ದೊಡ್ಡ ಸವಾಲಾಗಿದೆ. ಈ ಸರಕಾರ ಎಷ್ಟು ದಿನ ಅಸ್ತಿತ್ವದಲ್ಲಿರುತ್ತದೆ ಎಂಬ ಬಗ್ಗೆಯೂ ಶಂಕೆ ಇದೆ. ಸರಕಾರ ಉಳಿಸಿಕೊಳ್ಳುವುದು ಸುಲಭವಲ್ಲ. ಈ ಬಗ್ಗೆ ಜನರಿಗೂ ಅನುಮಾನವಿದೆ ಎಂದ ಎಚ್.ಡಿ.ಕುಮಾರಸ್ವಾಮಿ, ಬುಧವಾರ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ತಮಿಳುನಾಡಿನ ಸ್ಟಾಲಿನ್, ಅರವಿಂದ್ ಕೇಜ್ರಿವಾಲ್ ಮತ್ತಿತರ ಗಣ್ಯರು ಬರಲಿದ್ದಾರೆ.

 
ಎರಡು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 2 ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಎರಡೂ ಪಕ್ಷಗಳ ನಡುವೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಈ ಬಗ್ಗೆ ವಿಶ್ವಾಸಮತ ಯಾಚನೆ ಬಳಿಕ ಎರಡೂ ಪಕ್ಷಗಳ ಮುಖಂಡರು ಸೇರಿ ಚರ್ಚೆ ನಡೆಸುತ್ತೇವೆ.
-ಎಚ್.ಡಿ.ಕುಮಾರಸ್ವಾಮಿ, ನಿಯೋಜಿತ ಸಿಎಂ

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News