ಮೈಸೂರು: ಆಟೋ ಮೇಲೆ ಉರುಳಿ ಬಿದ್ದ ಮರ; ಸಾಫ್ಟ್ ವೇರ್ ಇಂಜಿನಿಯರ್ ಮೃತ್ಯು

Update: 2018-05-22 18:01 GMT

ಮೈಸೂರು,ಮೇ.22: ಆಟೋ ಮೇಲೆ ಮರ ಉರುಳಿಬಿದ್ದ ಪರಿಣಾಮ ಸ್ನೇಹಿತೆಯನ್ನು ನೋಡಲು ಚೆನ್ನೈನಿಂದ ಬಂದ ಯುವತಿಯೋರ್ವಳು ಮೈಸೂರಿನಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಚಲಿಸುತ್ತಿದ್ದ ಆಟೋ ಮೇಲೆ ಮಂಗಳವಾರ ರಾತ್ರಿ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ ಮರವೊಂದು ಉರುಳಿ ಬಿದ್ದ ಪರಿಣಾಮ ಆಟೋದಲ್ಲಿದ್ದ ಸಾಫ್ಟ್ ವೇರ್ ಎಂಜಿನಿಯರ್ ರೇವತಿ (25) ಮೃತಪಟ್ಟಿದ್ದಾಳೆ. ಆಕೆಯ ಸ್ನೇಹಿತೆ ವಾಸವಿ ಗುಪ್ತಾ ಮತ್ತು ಆಟೋ ಚಾಲಕ ರಾಜಣ್ಣ ಎಂಬುವವರಿಗೆ ತೀವ್ರ ಗಾಯಗಳಾಗಿವೆ.

ಕೆ.ಆರ್.ಎಸ್.ರಸ್ತೆಯ ಇ.ಎಸ್.ಐ.ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಸ್ನೇಹಿತೆಯನ್ನು ನೋಡಿಕೊಂಡು ವಾಪಸ್ ರೈಲ್ವೆ ಸ್ಟೇಷನ್ ಗೆ ಬರುವ ವೇಳೆ ದುರಂತ ಸಂಭವಿಸಿದೆ. ಇ.ಎಸ್.ಐ. ಆಸ್ಪತ್ರೆ ಸಮೀಪ ಆಟೋ ಮೇಲೆ ಮರ ಬುಡ ಸಮೇತ ಉರುಳಿ ಬಿದ್ದಿದ್ದು, ಆಟೋ ಹಿಂಭಾಗದ ಎಡಭಾಗದಲ್ಲಿ ಕುಳಿತಿದ್ದ ರೇವತಿ ಮೇಲೆ ಮರ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ.

ಆಟೋದಲ್ಲಿದ್ದ ಮೃತ ರೇವತಿ ಸ್ನೇಹಿತೆ ವಾಸವಿ ಗುಪ್ತಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಡಬಿಡದೆ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಮರ ಬಿದ್ದಿದ್ದು, ವಿ.ವಿ.ಪುರಂ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೇವತಿ ಮೃತ ದೇಹವನ್ನು ಕೆ.ಆರ್. ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News