ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ: ಬಿಜೆಪಿಯ ಭದ್ರಕೋಟೆ ಬೇಧಿಸಲು ಕಾಂಗ್ರೆಸ್ ಕಸರತ್ತು

Update: 2018-05-23 17:23 GMT

ಶಿವಮೊಗ್ಗ, ಮೇ 23: ವಿಧಾನಸಭೆ ಚುನಾವಣೆ ಪೂರ್ಣಗೊಂಡು ಹೊಸ ಸರ್ಕಾರ ರಚನೆಯಾಗುತ್ತಿರುವ ಬೆನ್ನಲ್ಲೆ, ಇದೀಗ ಮಲೆನಾಡು-ಕರಾವಳಿ-ಬಯಲು ಸೀಮೆ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ 'ನೈರುತ್ಯ ಪದವೀಧರ ಕ್ಷೇತ್ರ'ದ ವಿಧಾನ ಪರಿಷತ್ ಚುನಾವಣಾ ಕಣ ಕ್ರಮೇಣ ರಂಗೇರಲಾರಂಭಿಸಿದೆ. ಬಿಜೆಪಿ - ಕಾಂಗ್ರೆಸ್ ಪಕ್ಷದ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ನಿರ್ಮಾಣವಾಗುತ್ತಿದೆ. 

ಮಲೆನಾಡು ಪ್ರದೇಶವಾದ ಶಿವಮೊಗ್ಗ, ಕೊಡಗು, ಕರಾವಳಿ ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಬಯಲು ಸೀಮೆ ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಹಾಗೂ ಚೆನ್ನಗಿರಿ ತಾಲೂಕುಗಳು ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗುತ್ತವೆ. 

ಈ ಚುನಾವಣೆಯ ಮತದಾರರು ಪದವೀಧರರಾಗಿದ್ದಾರೆ. ಮತದಾನಕ್ಕೆ ಮತ ಪತ್ರ ಬಳಸಲಾಗುತ್ತದೆ. ಪಕ್ಷದ ಚಿಹ್ನೆಗಳಿರುವುದಿಲ್ಲ. ಅಭ್ಯರ್ಥಿಯ ಹೆಸರು ಮಾತ್ರವಿರುತ್ತದೆ. ಈ ಬಾರಿ ಅಭ್ಯರ್ಥಿಗಳ ಹೆಸರಿನ ಜೊತೆ ಅವರ ಭಾವಚಿತ್ರವನ್ನು ಕೂಡ ಮತಪತ್ರದಲ್ಲಿ ಮುದ್ರಿಸಲಾಗುತ್ತಿರುವುದು ವಿಶೇಷವಾಗಿದೆ. 
ಒಟ್ಟಾರೆ ಆರು ಜಿಲ್ಲೆಗಳ 30 ವಿಧಾನಸಭಾ ಏರಿಯಾಗಳು ಕ್ಷೇತ್ರ ವ್ಯಾಪ್ತಿಯಲ್ಲಿವೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿದೆ. 27 ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಂಪಾದಿಸಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕೇವಲ ಮೂರು ಕಡೆ (ಭದ್ರಾವತಿ, ಶೃಂಗೇರಿ, ಉಳ್ಳಾಲ) ಗೆಲುವು ಸಾಧಿಸಿದ್ದಾರೆ. 

ಶಿವಮೊಗ್ಗವೇ ಈ ಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ಕಾರಣದಿಂದ, ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವವರು ಶಿವಮೊಗ್ಗ ಮೂಲದವರೇ ಹೆಚ್ಚಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಕೂಡ ಬಿಜೆಪಿ-ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಿರುವವರು ಶಿವಮೊಗ್ಗದವರಾಗಿದ್ದಾರೆ. 

ಬಿಜೆಪಿಯಿಂದ ಮಾಜಿ ಸಂಸದ ಆಯನೂರು ಮಂಜುನಾಥ್‍ರವರು ಇದೇ ಮೊದಲ ಬಾರಿಗೆ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‍ನಿಂದ ಎಸ್.ಪಿ.ದಿನೇಶ್‍ರವರು ಸ್ಪರ್ಧಿಸುತ್ತಿದ್ದು, ಈ ಕ್ಷೇತ್ರದಿಂದ ಎರಡನೇ ಬಾರಿ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಇವರು ಕಾಂಗ್ರೆಸ್‍ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಉಳಿದಂತೆ ಜೆಡಿಎಸ್‍ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಯಾರೆಂಬುವುದು ಸ್ಪಷ್ಟವಾಗುತ್ತಿಲ್ಲ. ಮಂಗಳೂರು ಮೂಲದ ಅರುಣ್ ಎಂಬುವರು ಸ್ಪರ್ಧಿಸಲಿದ್ದಾರೆ ಎಂದು ಆ ಪಕ್ಷದ ಮೂಲಗಳು ಮಾಹಿತಿ ನೀಡುತ್ತಿವೆ. 

ಪ್ರಾಬಲ್ಯ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಸುಮಾರು 70 ಸಾವಿರ ಮತದಾರರಿದ್ದಾರೆ. ಜೂನ್ 8 ರಂದು ಮತದಾನ ನಡೆಯಲಿದೆ. ಈಗಾಗಲೇ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಕಂಡುಬರುತ್ತಿದೆ. ಜಿದ್ದಾಜಿದ್ದಿನ ಅಖಾಡಕ್ಕೆ ವೇದಿಕೆ ನಿರ್ಮಾಣವಾಗುತ್ತಿದೆ. 

ಈ ಕ್ಷೇತ್ರವು ಬಿಜೆಪಿ ಭದ್ರಕೋಟೆಯೆಂದೇ ಬಿಂಬಿತವಾಗಿದೆ. ಆ ಮಟ್ಟಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿದೆ. ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದುಕೊಂಡು ಬರುತ್ತಿರುವ ಹಾಲಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿಯವರು ಸತತ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ. ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. 

ಈ ಬಾರಿ ಅವರು ಚುನಾವಣಾ ಕಣದಿಂದ ದೂರ ಉಳಿದಿದ್ದಾರೆ. ಅವರ ಪುತ್ರ ಡಿ.ಎಸ್.ಅರುಣ್ ಟಿಕೆಟ್‍ಗೆ ಪೈಪೋಟಿ ನಡೆಸಿದ್ದರು. ಆದರೆ ಅಂತಿಮವಾಗಿ ಬಿಜೆಪಿ ವರಿಷ್ಠರು, ಆಯನೂರು ಮಂಜುನಾಥ್‍ಗೆ ಮಣೆ ಹಾಕಿದ್ದರು. ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ.ದಿನೇಶ್‍ರವರು, ಕಳೆದ ಚುನಾವಣೆಯಲ್ಲಿ ಡಿ.ಹೆಚ್.ಶಂಕರಮೂರ್ತಿ ವಿರುದ್ದ ಕಣಕ್ಕಿಳಿದಿದ್ದರು. ಉತ್ತಮ ಪೈಪೋಟಿ ನೀಡಿದ್ದರು, ಗೆಲುವು ಸಾಧ್ಯವಾಗಿರಲಿಲ್ಲ. 

ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರು ಕ್ಷೇತ್ರದಾದ್ಯಂತ ಓಡಾಡಿಕೊಂಡು, ಚುನಾವಣಾ ಸಿದ್ದತೆ ಮಾಡಿಕೊಂಡು ಬರುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಚುನಾವಣಾ ಘೋಷಣೆಗೆ ಇನ್ನೂ ಐದಾರು ತಿಂಗಳಿರುವಂತೆಯೇ ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಿಸಿ, ಚುನಾವಣಾ ಸಿದ್ದತೆಗಳಿಗೆ ಚಾಲನೆ ನೀಡಿತ್ತು. ಈ ಮೂಲಕ ಬಿಜೆಪಿ ಕೋಟೆಗೆ ಲಗ್ಗೆಯಿಡಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ.

ಆಯ್ಕೆಯಾಗಿದ್ದ ಡಿ.ಹೆಚ್.ಶಂಕರಮೂರ್ತಿ
ಕಳೆದ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿ ಡಿ.ಹೆಚ್.ಶಂಕರಮೂರ್ತಿಯವರು 13,926  (ಶೇ. 45.31) ಮತ ಪಡೆದು ಆಯ್ಕೆಯಾಗಿದ್ದರು. ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಪಿ.ದಿನೇಶ್‍ರವರು 10,140 (ಶೇ. 32.98) ಮತಗಳಿಸಿದ್ದರು. ಉಳಿದಂತೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಭೋಜೇಗೌಡರವರು 6875 (ಶೇ. 22.37) ಮತಗಳಿಸಿದ್ದರು. ಕಳೆದ ಬಾರಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿದ್ದ 57,120 ಮತದಾರರಲ್ಲಿ 30,729 ಜನರು ಮತ ಚಲಾವಣೆ ಮಾಡಿದ್ದರು. 2163 ಮತಗಳು ತಿರಸ್ಕೃತವಾಗಿದ್ದವು. 

'ಗೆಲುವು ನಿಶ್ಚಿತ' : ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್
'ಕಳೆದ ಬಾರಿಯ ಚುನಾವಣೆ ವೇಳೆ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿತ್ತು. ಕ್ಷೇತ್ರದಲ್ಲಿ ಆ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇಷ್ಟೆಲ್ಲದರ ಹೊರತಾಗಿಯೂ ತಾವು ಉತ್ತಮ ಮತಗಳಿಕೆ ಮಾಡಿದ್ದೆ. ಗೆಲುವಿನ ಸಮೀಪಕ್ಕೆ ಬಂದಿದ್ದೆ. ಈ ಬಾರಿಯ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಕಳೆದ ಹಲವು ವರ್ಷಗಳಿಂದ ಮತದಾರರೊಂದಿಗೆ ನಿರಂತರವಾಗಿ ನೇರ ಸಂಪರ್ಕದಲ್ಲಿದ್ದೇನೆ. ವೈಯಕ್ತಿಕವಾಗಿ ಸಂಪರ್ಕಿಸುವ ಕೆಲಸ ಮಾಡಿದ್ದೇನೆ. ಈ ಎಲ್ಲಾ ಅಂಶಗಳ ಜೊತೆಗೆ ಪಕ್ಷದ ತತ್ವ, ಸಿದ್ದಾಂತ ಮತ್ತೀತರ ವಿಷಯಗಳು ತಮ್ಮ ಗೆಲುವಿಗೆ ಕಾರಣವಾಗಲಿದೆ' ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ದಿನೇಶ್ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. 

'ಆಯನೂರು ಜಯ ಖಚಿತ' : ಬಿಜೆಪಿ ಮುಖಂಡ ಡಿ.ಎಸ್.ಅರುಣ್
'ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಳೆದ ಐದು ಚುನಾವಣೆಗಳಿಂದ, ತಮ್ಮ ತಂದೆ ಡಿ.ಎಸ್.ಶಂಕರಮೂರ್ತಿ ಕಣಕ್ಕಿಳಿದು ಜಯ ಸಾಧಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಆಯನೂರು ಮಂಜುನಾಥ್‍ರವರು ಕೂಡ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ 30 ವಿಧಾನಸಭಾ ಕ್ಷೇತ್ರಗಳಲ್ಲಿ, 27 ಕಡೆ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ಈ ಎಲ್ಲ ಕಾರಣಗಳಿಂದ ಪಕ್ಷದ ಗೆಲುವು ಖಚಿತವಾಗಿದೆ' ಎಂದು ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್ ಅಭಿಪ್ರಾಯಪಡುತ್ತಾರೆ. 

ಶಿಕ್ಷಕರ ಕ್ಷೇತ್ರದ ಹಣಾಹಣಿ
ನೈರುತ್ಯ ಪದವೀಧರ ಕ್ಷೇತ್ರದ ಜೊತೆಜೊತೆಗೆ ನೈರುತ್ಯ ಶಿಕ್ಷಕರ ಕ್ಷೇತ್ರದ ಮೂಲಕ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಸುಮಾರು 20 ಸಾವಿರ ಮತದಾರರಿದ್ದಾರೆ. ಶಿಕ್ಷಕರು ಮತದಾನದ ಹಕ್ಕು ಹೊಂದಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್‍ರವರು ಸತತ ಗೆಲುವು ಸಂಪಾದಿಸಿದ್ದಾರೆ. ಈ ಬಾರಿಯೂ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭೋಜೇಗೌಡರವರು, ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಕಾಂಗ್ರೆಸ್‍ನಿಂದ ಮಂಜುನಾಥ್ ಎಂಬುವರು ಅಭ್ಯರ್ಥಿಯಾಗಿದ್ದಾರೆ. ಮೇಲ್ನೋಟಕ್ಕೆ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಸ್ಪರ್ಧೆ ಕಂಡುಬರುತ್ತಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News