ತೂತುಕುಡಿ ಗೋಲಿಬಾರ್ ಅಮಾನವೀಯ: ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ, ಮೇ 24: ತಮಿಳುನಾಡಿನ ತೂತುಕುಡಿಯಲ್ಲಿ ಸ್ಟರ್ಲೈಟ್ ತಾಮ್ರ ಸಂಸ್ಕರಣ ಘಟಕದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ರೈತರು ಮತ್ತು ಪರಿಸರವಾದಿಗಳ ಮೇಲೆ ತಮಿಳುನಾಡು ಸರಕಾರ ಗೋಲಿಬಾರ್ ನಡೆಸಿ 11 ರೈತರ ಸಾವಿಗೆ ಕಾರಣವಾದ ಘಟನೆಯನ್ನು ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರೈತಸಂಘದ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಅಮೇರಿಕಾದಿಂದ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವ ದರ್ಶನ್ ಪುಟ್ಟಣ್ಣಯ್ಯ, ತಾಮ್ರ ಸಂಸ್ಕರಣ ಘಟಕದಿಂದ ಹೊರ ಸೂಸುತ್ತಿದ್ದ ವಿಷಾನಿಲ ಜೀವ ಹಾನಿಗೆ ಕಾರಣವಾಗುತ್ತಿದ್ದುದನ್ನು ವಿರೋಧಿಸಿ ಈ ಘಟಕವನ್ನು ಮುಚ್ಚಬೇಕೆಂದು ಒತ್ತಾಯಿಸಿ ಚಳವಳಿ ಮಾಡುತ್ತಿದ್ದ ಪ್ರತಿಭಟನಾಕಾರರ ಮೇಲೆ ಸರಕಾರ ಗೋಲಿಬಾರ್ ಮಾಡಿ ಅವಮಾನವೀಯವಾಗಿ ವರ್ತಿಸಿದೆ. ಕೂಡಲೇ ರೈತ ಕುಟುಂಬಗಳಿಗೆ ತಮಿಳುನಾಡು ಸರಕಾರ ಸೂಕ್ತ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾವುದೇ ರಾಜ್ಯ ಹಾಗೂ ಕೇಂದ್ರ ಸರಕಾರ ಇಂತಹ ಜೀವ ವಿರೋಧಿ, ಪರಿಸರ ವಿರೋಧಿ ಕೈಗಾರಿಕೆಗಳ ಹಿತ ಕಾಪಾಡದೆ ರೈತರು ಮತ್ತು ಜನಸಾಮಾನ್ಯರ ಹಿತ ಕಾಪಾಡುವುದನ್ನು ಆದ್ಯತೆ ಮಾಡಿಕೊಳ್ಳಬೇಕು ಎಂದು ಅವರು ತಾಕೀತು ಮಾಡಿದ್ದಾರೆ.